ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಮೂರು ದಿನ ನಡೆದ ಹಿಂಸಾಚಾರದಲ್ಲಿ ಅಂದಾಜು 79 ಮನೆಗಳು, 52 ಅಂಗಡಿ, 5 ಗೋದಾಮು, 3 ಕಾರ್ಖಾನೆ, 4 ಮಸೀದಿಗಳು ಹಾಗೂ 500 ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರು ಹೇಳಿದ್ದಾರೆ. ಗಲಭೆಯಲ್ಲಿ 38 ಮಂದಿ ಮೃತಪಟ್ಟು, 350ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಲಭೆ ವೇಳೆ ದೆಹಲಿ ಅಗ್ನಿಶಾಮಕ ಠಾಣೆಗೆ 218 ಕರೆಗಳು ಬಂದಿದ್ದು, ಬಹುತೇಕ ಎಲ್ಲ ಕರೆಗಳಿಗೆ ಸ್ಪಂದಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗರ್ಗ್ ತಿಳಿಸಿದರು.
ಕಟ್ಟಡ ಹಾಗೂ ವಾಹನಗಳಿಗೆ ಸೀಮೆಎಣ್ಣೆ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಬೆಂಕಿಗೆ ತುತ್ತಾದ ಅಂಗಡಿ ಹಾಗೂ ಕಟ್ಟಡಗಳನ್ನು ಮುಚ್ಚಲಾಗಿದೆ. ಮಂಗಳವಾರ ಅಧಿಕ ಅಗ್ನಿ ಅನಾಹುತಗಳು ಕಂಡು ಬಂದಿವೆ ಎಂದು ಹೇಳಿದರು.