ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತದ ( ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್) ನೂತನ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಹೈಕೋಟ್೯ ತಡೆಯಾಜ್ಙೆ ನೀಡಿದೆ. ಬುಧವಾರ(ಫೆ.5) ದಂದು ಬ್ಯಾಂಕಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿ ದಿನ ನಿಗದಿಪಡಿಸಿದ್ದರು. ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ಜ.25 ರಂದು ನಡೆದ ಚುನಾವಣೆಯಲ್ಲಿ ಬ್ಯಾಂಕಿನ ಮರಣ ಹೊಂದಿರುವ ಸದಸ್ಯರು, ಸಾಲ ಸುಸ್ತಿದಾರರು, ಅನರ್ಹರ ಹೆಸರಿನಲ್ಲಿ ಮತದಾನ ಮಾಡಲಾಗಿದೆ ಎಂದು ಅಪಾದಿಸಿ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಜೈನ್ ಅವರು ಹೈಕೋಟ್೯ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಹೈಕೋಟ್೯ ಫೆ.5 ರಂದು ಬ್ಯಾಂಕಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ದಾವೆಯ ಮುಂದಿನ ವಿಚಾರಣಾ ದಿನದವರೆಗೆ ತಡೆಯಾಜ್ಙೆ ನೀಡಿ ಆದೇಶಿಸಿದೆ. ಜ.25 ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ 13ರ ಪೈಕಿ 12 ಮಂದಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲು ಮತದಾರರ ಪಟ್ಟಿಗೆ ಸಂಬಂಧಿಸಿ ಗೊಂದಲವುಂಟಾಗಿ ಬಿಜೆಪಿ ಮತ್ರು ಕಾಂಗ್ರೆಸ್ ಪಕ್ಷದ ಬೆಂಬಲಿತ ನಾಯಕರೊಳಗೆ ರಂಪಾಟ ನಡೆದ ಹಿನ್ಬಲೆಯಲ್ಲಿ ಒಂದು ತಾಸುಗಳ ಕಾಲ ಮತದಾನವೇ ಸ್ಥಗಿತಗೊಂಡಿತ್ತಲ್ಲದೆ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತ್ತು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ 7 ಸ್ಥಾನ ಪಡೆದಿತ್ತು.ಕಾಂಗ್ರೆಸ್ 5 ಸ್ಥಾನ ಗಳಿಸಿತ್ತು.,40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಂಟ್ಚಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಆಡಳಿತ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ತೆಕ್ಕೆಗೆ ಬಂದಿತ್ತು.