ಕೋರ್ಟಿನಲ್ಲಿದೆ
ಒಂದು ಕೇಸ್ ಇತ್ಯರ್ಥಕ್ಕಾಗಿ.
ಕೊಟ್ಟವನು ಪಕ್ಕದ ಮನೆಯವನು
ಕಾರಣ ಪಪ್ಪಾಯಿ ಮರ..!!
ನನ್ನ ಮತ್ತು ಅವನ
ಮನೆಯ ಬೇಲಿಯ ಮಧ್ಯೆ
ಬೆಳೆದಿದೆ ಒಂದು ಪಪ್ಪಾಯಿ ಮರ..
ಇದು ನನ್ನದು ಎಂದವನು.,
ನನ್ನದೆಂದು ನಾನು.
ನಿಲ್ಲದ ಜಗಳ
ಕೋರ್ಟ್ ಮೆಟ್ಟಲೇರಿಸಿದ್ದು..!
ನ್ಯಾಯಾಧೀಶರೇ ಅದು ನನಗೆ ಸೇರಿದ್ದು..
ದಿನ ನೀರು ಹಾಕಿದ್ದೇನೆ.
ಇಲ್ಲ ಅದು ನನ್ನದು
ಗೊಬ್ಬರ ಸುರಿದಿದ್ದೇನೆ..
ನಾನು ತಿಂದು ಹಾಕಿದ ಬೀಜ
ಮೊಳಕೆಯೊಡೆದು
ಬಂದ ಗಿಡವದು..
ಇಲ್ಲ ಅದು ಕಾಗೆ ತಿಂದು ಹಾಕಿದ ಬೀಜ..
ಈ ಕೇಸನ್ನು ನಾಳೆಗೆ
ಮುಂದೂಡಲಾಗಿದೆ..
ಅಲ್ಲಿವರೆಗೂ ಯಾರು ಆ ಪಪ್ಪಾಯಿಯನ್ನು
ಮುಟ್ಟುವಂತಿಲ್ಲ
ಮರುದಿನ
ಲಾಯರ್ ವಾದಿಸಿದ
ನೀರು ಹಾಕಿದ್ದು ನನ್ನ ಕಕ್ಷಿದಾರ
ಇಲ್ಲ ಗೊಬ್ಬರ ಹಾಕಿದ್ದು ನನ್ನ ಕಕ್ಷಿದಾರ..
ಗೊಬ್ಬರ ಹಾಕಿದರೆ ಸಾಲದು ನೀರೆ ಮುಖ್ಯ
ಕಾಯಿ ಬಿಡಲು ನೀರು ಸಾಕಾಗಲ್ಲ
ಗೊಬ್ಬರವು ಬೇಕು..
ಮತ್ತೆ
ನ್ಯಾಯಾಧೀಶರ ಅದೇ ಮಾತು
ನಾಳೆಗೆ ಮುಂದೂಡಲಾಗಿದೆ..
ಅಲ್ಲಿಯವರೆಗೆ….
ನಿನ್ನೆಯೊಂದು ಪಪ್ಪಾಯಿ
ಹಣ್ಣಾಗಿ
ಉದುರಿ ಹೋಗಿದೆ,
ಇವತ್ತೊಂದು ಉದುರುವ ಹಂತದಲ್ಲಿದೆ.,
ನಾಳೆಗೊಂದು ಹಣ್ಣಾಗುವಂತಿದೆ..!
ಕೆಳಗೆ ಬಿದ್ದ ಹಣ್ಣನ್ನು
ಇರುವೆ, ಹುಳ ಹಂಚಿ ತಿನ್ನುತ್ತಿವೆ.
ಉದುರುವ ಹಂತದಲ್ಲಿರುವ ಹಣ್ಣನ್ನು
ಅಳಿಲು, ಬಾವಲಿ, ಕಾಗೆ ಸಮಪಾಲು ಮಾಡಿಕೊಂಡಿವೆ.
ಹಣ್ಣಾಗಲಿರುವ ಕಾಯಿಗೆ
ಗಿಳಿ,ಗುಬ್ಬಿ ಸ್ಕೆಚ್ ಹಾಕಿವೆ..
ಅಂತು ದಿನ ಹಕ್ಕಿಗಳ ಕಲರವ ಅದರ ಸುತ್ತ..!
ನಾವು ನಾಳೆಯ
ತೀರ್ಪಿಗೆ ಕಾಯುತ್ತಿದ್ದೇವೆ..
ಮತ್ತೆ ಮುಂದೂಡಿದರೆ
ಮತ್ತೆ ಕಾಯುತ್ತೇವೆ…!
✍ಯತೀಶ್ ಕಾಮಾಜೆ