ಬಂಟ್ವಾಳ: ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಹೊರೆಕಾಣಿಕೆ ಸಮರ್ಪಣೆಯಾಗಲಿದ್ದು, ಜ.26 ರಂದು ಮಧ್ಯಾಹ್ನ 2.30ಕ್ಕೆ ತಾಲೂಕಿನ ಎಲ್ಲಾ ಕಡೆಯ ಹೊರೆಕಾಣಿಕೆಯನ್ನು ಒಟ್ಟುಗೂಡಿಸಿ ಬಳಿಕ ಕೈಕಂಬ ದ್ವಾರದವರೆಗೆ ಪಾದಯಾತ್ರೆಯ ಮೂಲಕ ಮೆರವಣಿಗೆ ನಡೆಸಿ ಕಟೀಲು ಕ್ಷೇತ್ರಕ್ಕೆ ಸಮರ್ಪಿಸಲಾಗುತ್ತದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಪೊಳಲಿ ಕ್ಷೇತ್ರಕ್ಕೆ ಸುಮಾರು 270 ರಷ್ಟು ವಾಹನಗಳ ಮೂಲಕ ಹೊರೆಕಾಣಿಕೆ ಸಮರ್ಪಣೆಯಾಗಿದ್ದು, ಅದೇ ರೀತಿಯಲ್ಲಿ ಹೊರೆಕಾಣಿಕೆ ಸಮರ್ಪಣೆಗೆ ಸಿದ್ಧತೆ ನಡೆಸಲಾಗಿದೆ.
ಭಕ್ತಾಧಿಗಳು ನಿರ್ದಿಷ್ಟ ಬ್ಯ್ರಾಂಡ್ನ ಅಕ್ಕಿ, ಸಾವಯನ ತರಕಾರಿಗಳನ್ನು ಸಮರ್ಪಣೆ ಮಾಡಬಹುದಾಗಿದೆ. ತಾಲೂಕಿನ ಎಲ್ಲಾ ಧಾರ್ಮಿಕ ಕ್ಷೇತ್ರಗಳು, ಜನಪ್ರತಿನಿಧಿಗಳು, ವಿದ್ಯಾಸಂಸ್ಥೆಗಳು, ಸಂಘ ಸಂಸ್ಥೆಗಳು ಹೀಗೆ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂಟ್ವಾಳದಿಂದ ಹೊರೆಕಾಣಿಕೆಯ ದಿನ ಹಾಗೂ ಬ್ರಹ್ಮಕಲಶಾಭಿಷೇಕದ ದಿನ ಬಿ.ಸಿ.ರೋಡಿನಿಂದ ಕಟೀಲಿಗೆ ಉಚಿತ ಬಸ್ಸಿನ ವ್ಯವಸ್ಥೆ ಇದೆ ಎಂದರು.
ಕಟೀಲು ಕ್ಷೇತ್ರದಲ್ಲಿ ವಾಹನ ನಿಲುಗಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಜಾಗದ ಕೊರತೆ ಕಾಡುತ್ತಿದ್ದು, ಅದಕ್ಕಾಗಿ ಭೂಮಿ ಖರೀದಿಗೆ ನಿಧಿ ಸಮರ್ಪಣೆಯ ಕಾರ್ಯ ನಡೆಯಲಿದೆ. ಹೊರೆಕಾಣಿಕೆ ಸಂದರ್ಭದಲ್ಲೇ ತಾಯಿಯ ನಡೆಯಲ್ಲಿ ನಿಧಿ ಸಮರ್ಪಣೆಗೂ ಆಲೋಚನೆ ಮಾಡಲಾಗಿದೆ. ಭಕ್ತಾಧಿಗಳು ಸಾಧ್ಯವಾದಷ್ಟರ ಮಟ್ಟಿಗೆ ತಮ್ಮ ದೇಣಿಗೆ ನೀಡಲು ಅವಕಾಶವಿದೆ.
ಪತ್ರಿಕಾಗೋಷ್ಠಿಯಲ್ಲಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಚಂದ್ರಹಾಸ ಡಿ.ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ತೇವು ತಾರಾನಾಥ ಕೊಟ್ಟಾರಿ ಉಪಸ್ಥಿತರಿದ್ದರು.
ಎಲ್ಲೆಲ್ಲಿಂದ ಹೊರೆಕಾಣಿಕೆ.?
ಕಟೀಲು ಕ್ಷೇತ್ರಕ್ಕೆ ಜ.22ರಂದು ಬೆಳಗ್ಗೆ ಶಿಬರೂರು, ಅತ್ತೂರು, ಕೊಡೆತ್ತೂರು, ಜ.23ರಂದು ಸಂಜೆ ಮಂಗಳೂರು, ಜ.24ರಂದು ಬೆಳಗ್ಗೆ ಬಪ್ಪನಾಡು, ಉಳ್ಳಾಲ, ಸಂಜೆ ಬಜ್ಪೆ, ಜ.25ರಂದು ಕಾಸರಗೋಡು, ಸುಳ್ಯ, ಜ.26ರಂದು ಬಂಟ್ವಾಳ ತಾಲೂಕು, ಜ.27ರಂದು ಬೆಳಗ್ಗೆ ಪುತ್ತೂರು, ಸಂಜೆ ಕಾವೂರು, ಕಳತ್ತೂರು, ಜ.28ರಂದು ಉಡುಪಿ ಹಾಗೂ ಜ.29ರಂದು ಬೆಳ್ತಂಗಡಿಯಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.