ವಿಟ್ಲ: ಮಕ್ಕಳ ಲೋಕ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ವಿಟ್ಲದ ಸ.ಮಾ.ಹಿ.ಪ್ರಾ. ಶಾಲೆಯ ಆಶ್ರಯದಲ್ಲಿ ಡಿ.21 ರಂದು ಬಂಟ್ವಾಳ ತಾ. 15ನೇ ಮಕ್ಕಳ ಸಾಹಿತ್ಯ ಸಮ್ಮೇಳನ ವಿಟ್ಲ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷೆಯಾಗಿ ವಿಟ್ಲ ಸ.ಮಾ.ಹಿ.ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಬಿ. ಚಣಿಲ ಆಯ್ಕೆಯಾಗಿದ್ದಾರೆ.
ವಿಟ್ಲ ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಇವರು ತಿರುಮಲೇಶ್ವರ ಭಟ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ. ವಿಟ್ಲದ ಯಕ್ಷಸಿಂಧೂರ ಪ್ರತಿಷ್ಠಾನದ ಸ್ಥಾಪಕರಾದ ಚಣಿಲ ಸುಬ್ರಹ್ಮಣ್ಯ ಭಟ್ ಇವಳ ದೊಡ್ಡಪ್ಪರಾಗಿದ್ದಾರೆ.
ಯಕ್ಷಗಾನದ ಬಾಲಕಲಾವಿದೆಯಾದ ಇವರು ಭಾಗವತಿಕೆ, ಮದ್ದಳೆ ನಾಟ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ 9ನೇ ವರ್ಷದಲ್ಲಿಯೇ ಏಕವ್ಯಕ್ತಿ ಯಕ್ಷಗಾನದ ನಿರ್ವಹಣೆ ಮೂಲಕ ಭೇಷ್ ಎನಿಸಿಕೊಂಡ ಬಾಲಪ್ರತಿಭೆ. ಪ್ರತಿಭಾ ಕಾರಂಜಿ ಯಕ್ಷಗಾನ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದಿದ್ದಾಳೆ. ಅಭಿನಯ, ಛದ್ಮವೇಷ, ಧಾರ್ಮಿಕ ಪಠಣ, ಚಿತ್ರಕಲೆ, ಪ್ರಬಂಧದಲ್ಲಿ ಬಹುಮಾನಗಳನ್ನು ಬಾಚಿಕೊಂಡಿರುವ ಈಕೆ ಭರತನಾಟ್ಯ, ಸಂಗೀತದ ವಿದ್ಯಾರ್ಥಿನಿಯಾಗಿದ್ದಾಳೆ.
ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಇವಳ ಬರಹಗಳು ಇವಳದೇ ಚಿಂತನೆಗಳ ಮೂಲಕ ಮೂಡಿ ಬರುತ್ತಿವೆ. ಈ ವರ್ಷ ಧರ್ಮಸ್ಥಳದ ಶಾಂತಿವನ ಟ್ರಸ್ಟ್(ರಿ) ಸಂಘಟಿಸಿದ ಮೌಲ್ಯಶಿಕ್ಷಣ ಭಾಷಣದಲ್ಲಿ ಬಂಟ್ವಾಳ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.