ಮಂಗಳೂರು: ಮಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡಿದ ಬೆನ್ನಲ್ಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿಷಯವಾಗಿ ಶೋಭಾ ಕರಂದ್ಲಾಜೆ ಮಾತನಾಡಿ, ಸರ್ಕಾರ ಪರಿಹಾರ ಘೋಷಣೆ ಮಾಡಿದೆ ಅಷ್ಟೆ. ಪರಿಹಾರ ನೀಡಿಲ್ಲ. ಮಂಗಳೂರು ಗಲಭೆಯಲ್ಲಿ ಮೃತಪಟ್ಟವರು ಅಪರಾಧಿಗಳು ಅಂತ ಸಾಬೀತಾದ್ರೆ ಪರಿಹಾರ ವಾಪಾಸ್ ಪಡೆಯುವ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಪರಿಹಾರದ ವಿಚಾರವನ್ನು ಆಲೋಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿ ಅಪರಾಧಿಗಳಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಮಂಗಳೂರು ಹಿಂಸಾಚಾರಕ್ಕೆ ಪಿ ಎಫ್ ಐ-ಕೆಎಫ್ ಡಿ ಕಾರಣ ಆರೋಪಿಸಿ, ಇಂತಹವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹಾಗಾಗಿ ಈ ಸಂಘಟನೆಗಳು ಕೂಡಲೇ ನಿಷೇಧ ಆಗಬೇಕು ಎಂದರು. ಅಷ್ಟೇ ಅಲ್ಲ ಮಂಗಳೂರಿನ ಹಾಸ್ಟೆಲ್ ಮತ್ತು ರೂಂ ಗಳಲ್ಲಿರುವ ಕೇರಳ ವಿದ್ಯಾರ್ಥಿಗಳು ಗಲಭೆ ಮಾಡುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ಬಳಿಕ ಕೂಡ ಇಲ್ಲೆ ಇದ್ದು ಗಲಭೆ ಮಾಡುತ್ತಿದ್ದಾರೆ. ಶಾಂತಿ ಬಯಸುವ ಮುಸಲ್ಮಾನರು ಈ ಸಂಘಟನೆಗಳಲ್ಲಿ ಇಲ್ಲ ಎಂದು ಹೇಳಿದರು.