ಬಂಟ್ವಾಳ: ಶಾಸಕರ ಅನುದಾನದ 1.53 ಕೋಟಿ ರೂ. ವೆಚ್ಚದಲ್ಲಿ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ದೈಲಾ-ಲಕ್ಷ್ಮೀಕೋಡಿ ವರೆಗಿನ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ಇಲ್ಲಿನ ತೆಂಕಾಯಿಬೊಟ್ಟು ಎಂಬಲ್ಲಿ ದೇವಸ್ಥಾನದ ಪ್ರಧಾನ ರಾಮಚಂದ್ರ ಭಟ್ ಅವರು ಧಾರ್ಮಿಕವಿಧಿ ವಿಧಾನ ನೆರವೇರಿಸಿದರು. ಬಳಿಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಬಂಟ್ವಾಳ ಉಪವಿಭಾಗದಡಿ ಸುಮಾರು 1.53 ಕೋಟಿ ವೆಚ್ಚದಲ್ಲಿ ದೈಲಾ-ಲಕ್ಷ್ಮೀಕೋಡಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಈ ರಸ್ತೆಯು ಸಂಪೂರ್ಣ ಕಾಂಕ್ರೀಟ್ ರಸ್ತೆಯಾಗಿದ್ದು, ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಅದೇ ರೀತಿ 2019-20ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಕೊಯಿಲ ಗ್ರಾಮದ ಗುತ್ತುವಿನಿಂದ ಅಮ್ಮೇಲವರೆಗಿನ (ಪರಿಶಿಷ್ಟ ಜಾತಿ) ಕಾಂಕ್ರಿಟ್ ರಸ್ತೆ ಕಾಮಗಾರಿ ಹಾಗೂ ರಾಯಿ ಗ್ರಾಮದ ಮಾನಡ್ಕದಿಂದ ರಾಮೇರಿ ಪರಿಶಿಷ್ಟ ಪಂಗಡ ಕಾಲನಿಗೆ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ಸಿಕ್ಕಿರುತ್ತದೆ ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ರಾಯಿ ಗ್ರಾ.ಪಂ. ಅಧ್ಯಕ್ಷ ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಹರೀಶ್ ರಾಯಿ, ರಾಘವ ಅಮೀನ್, ಪದ್ಮನಾಭ ಗೌಡ, ಪ್ರಮುಖರಾದ ಎಂ.ಪಿ.ದಿನೇಶ್, ವಿಶ್ವನಾಥ ಗೌಡ, ಸಂತೋಷ್ ರಾಯಿಬೆಟ್ಟು, ವಸಂತ ಗೌಡ, ಪರಮೇಶ್ವರ ಪೂಜಾರಿ, ಕೃಷ್ಣ ಭಟ್, ಸಂತೋಷ್ ಗೌಡ, ಸುಂದರ ಪೂಜಾರಿ, ಚಂದ್ರಶೇಖರ ಗೌಡ, ಇಂದಿರಾ, ರಮಾನಾಥ ರಾಯಿ, ಶೀತಲ, ಸದಾನಂದ ಗೌಡ ಮತ್ತಾವು, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.