ಭರವಸೆಯ ಬೆಳಕಿನಲಿ
ನಾ ಕಂಡ ಕನಸು ನಿನ್ನೆದೆ
ಗಡಲ ಸೇರಿದಾಗ ತುಡಿವ
ಹಿಡಿದಿಡದ ತುಮುಲಗಳ
ತಾಕಲಾಟಕೆ ತೆರೆಯ ಸ್ನೇಹ
ದಾರಿಗಾಣದೆ ತೆವಳುತಿರುವ
ಮನದುನ್ಮಾದಕೆ ಮೌನ
ಮುದ್ರೆಯನೊತ್ತಿ ಮುದದಿ
ಹದವಾಗಿ ಮುತ್ತಿಕ್ಕುವಾಗ
ಮಿಲನದ ಸವಿ ಮೋಹ
ಎಲ್ಲರೆಸೆದ ವಾಗ್ಬಾಣಗಳ
ಅಲ್ಲಲ್ಲೆ ತುಂಡರಿಸಿ ಬಾಂಬು
ಗಳನೆಲ್ಲ ನಿಷ್ಕ್ರಿಯಗೊಳಿಸಿ
ಮುನ್ನುಗ್ಗುವಾಗ ದೂರದ
ಚಂದಿರನ ದೀರ್ಘ ಚುಂಬನ
ದಟ್ಟೈಸಿದ ಮೋಡಗಳನೆಲ್ಲ
ಚೆದುರಿಸಿ ಗಿರಿತೂರ್ಯದಾಚೆ
ಸುರಿದು ಸುಣ್ಣ ಸಾರಿಸುವಾಗ
ಮುಸುಕಿನೊಳಗೆ ನಸುನಗುವ
ಬಾಹು ಬಂಧನ
ಕೊರಗಿನಲಿ ಮರುಗುತಿರುವ
ಎದೆಪದ್ಮದ ಭಾವ ಬಿಂದುಗಳನೆಲ್ಲ
ನಿನ್ನಡಿಯಲೇ ಸಿಂಗರಿಸಿ ರಂಗೋಲಿ
ಇಡುವಾಗ ಅದೆಂಥದೋ
ನವಿರು ರೋಮಾಂಚನ
#ನೀ ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301