ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶ್ರೀ ಮಹಾಬಲ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಭಾಗವತ ಸಪ್ತಾಹ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಶ್ರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ, ಶ್ರೀಕ್ಷೇತ್ರದಲ್ಲಿ ಶ್ರೀ ಭಾಗವತ ಸಪ್ತಾಹ ಚೊಚ್ಚಲ ಬಾರಿ ನಡೆಸಲಾಗುತ್ತಿದೆ. ಯುಗಯುಗಾಂತರಗಳಲ್ಲಿ ಅವತರಿಸಿದ ಮಹಾಪುರುಷರ ಜೀವನ ವೃತ್ತಾಂತಗಳೊಂದಿಗೆ ಬದುಕು ಹೇಗಿರಬೇಕು ಎಂದು ಶ್ರೀ ಭಾಗವತ ಅತ್ಯಂತ ಸರಳ ರೀತಿಯಲ್ಲಿ ತಿಳಿಸಿ ಕೊಡುತ್ತದೆ ಎಂದು ತಿಳಿಸಿದರು.
ಶ್ರೀ ಭಾಗವತದ ಪ್ರವಚನಕಾರರಾಗಿ ಭಾಗವಹಿಸಿದ ಹಿರಿಯ ಧಾರ್ಮಿಕ ಚಿಂತಕ ಕೆಯ್ಯೂರು ನಾರಾಯಣ ಭಟ್ ಶ್ರೀ ಭಾಗವತ ಜೀವನ ದಿಗ್ದರ್ಶಕವಾಗಿದ್ದು, ಇದರ ತತ್ವ, ಸತ್ವ ಜೀವನದಲ್ಲಿ ಅನುಷ್ಠಾನಗೊಂಡರೆ ಅವರು ತನ್ನಿಂತಾನೇ ಸಜ್ಜನರಾಗಿ, ಸಾತ್ವಿಕರಾಗಿ ಉಜ್ಜೀವನ ನಡೆಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ ಸಣ್ಣಗುತ್ತು, ನಿವೃತ್ತ ಶಿಕ್ಷಕ ರಾಮಚಂದ್ರ ಭಟ್, ಸಮಿತಿಯ ಚಂದ್ರಶೇಖರ್ ಕಣಿಯೂರು, ನಾಗರಾಜ ಕಣಿಯೂರು, ನವೀನ್, ದೀಕ್ಷಿತ್, ಶ್ರೀ ಮಾತಾ ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.