ಬಂಟ್ವಾಳ : ತುಳುವಿನಲ್ಲಿ ಪ್ರದೇಶವಾರು ಕೊಂಚ ಮಟ್ಟಿನ ಬದಲಾವಣೆಗಳಿದ್ದರೂ, ತುಳುವರು ನಾವೆಲ್ಲರೂ ಒಂದೇ ಎಂಬ ಗೌರವ ಎಲ್ಲರಲ್ಲಿದೆ. ಇಡೀ ಜಗತ್ತಿನಲ್ಲೇ ಅತ್ಯಂತ ಮೃದು ಭಾಷೆ ಎಂದು ಗೌರವಿಸಲ್ಪಡುವ ತುಳು ಭಾಷೆಯನ್ನು ಮಾತನಾಡುವವರ ಮನಸ್ಸು ಕೂಡ ಮೃದುವಾಗಿರುತ್ತದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಹೇಳಿದರು.
ತುಳುಕೂಟ ಬಂಟ್ವಾಳ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶನಿವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಆಯೋಜಿಸಿದ್ದ ತುಳು ಕತೆ ಹೇಳುವುದು ಮತ್ತು ತುಳು ಪದ್ಯ ಹಾಡುವ ಸ್ಪರ್ಧೆಯನ್ನು ಉದ್ಘಾಟಿಸಿದರು. ನಮ್ಮ ಆಡಳಿತ ಭಾಷೆ ಕನ್ನಡವಾಗಿದ್ದರೂ ತಾನು ಕಚೇರಿಗೆ ಬಂದವರಲ್ಲಿ ತುಳುವಿನಲ್ಲೇ ಮಾತನಾಡಿದಾಗ ಹೆಚ್ಚು ಆತ್ಮೀಯತೆ ಬೆಳೆಯುತ್ತದೆ ಎಂದರು.
ಕಲಾವಿದ ಸುಂದರ ರೈ ಮಂದಾರ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದು, ಅವಕಾಶಗಳು ಸಿಕ್ಕಿದಾಗ ಮುನ್ನುಗ್ಗುವ ಅಭ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ತುಳುಭಾಷೆಗೆ ರಂಗಭೂಮಿ ವಿಶೇಷ ಕೊಡುಗೆಯನ್ನಿತ್ತಿದ್ದು, ಅದು ತನಗೆ ಬದುಕನ್ನು ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ, ವಿಶಿಷ್ಟ ಕಲ್ಪನೆಯ ಮೂಲಕ ತುಳುಕೂಟ ಹಮ್ಮಿಕೊಂಡಿರುವ ಸ್ಪರ್ಧೆಗೆ ತುಳುವರಿಂದ ನಿರೀಕ್ಷೆಗೆ ಮೀರಿದ ಸ್ಪಂದನೆ ದೊರಕಿರುವುದು ತೃಪ್ತಿ ತಂದಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅವರು ತುಳುಕೂಟದ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಽಕಾರಿ ಜ್ಞಾನೇಶ್ ಪಿ, ತುಳುಕೂಟದ ಗೌರವಾಧ್ಯಕ್ಷ ಎ.ಸಿ.ಭಂಡಾರಿ, ಹವ್ಯಾಸಿ ಕಲಾವಿದ ಸದಾಶಿವ ಡಿ.ತುಂಬೆ ಉಪಸ್ಥಿತರಿದ್ದರು. ಸ್ಪರ್ಧಾ ಸಮಿತಿಯ ಸಂಚಾಲಕ ಗೋಪಾಲ ಅಂಚನ್ ಅವರು ಪ್ರಸ್ತಾವನೆಗೈದು ಸ್ಪರ್ಧೆಯ ನಿಯಮಾವಳಿಗಳನ್ನು ವಿವರಿಸಿದರು.
ಸ್ಪರ್ಧಾ ಸಮಿತಿಯ ಸಂಚಾಲಕ ಕೆ.ರಮೇಶ್ ನಾಯಕ್ ರಾಯಿ ಸ್ವಾಗತಿಸಿದರು. ಕೋಶಾಽಕಾರಿ ಸುಭಾಶ್ಚಂದ್ರ ಜೈನ್ ವಂದಿಸಿದರು. ಜತೆ ಕಾರ್ಯದರ್ಶಿ ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಎರಡೂ ವಿಭಾಗಗಳಲ್ಲಿ ತಲಾ ೧೫೦ಕ್ಕೂ ಅಽಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.