Friday, October 20, 2023

ಅಣ್ಣಳಿಕೆ ಯಕ್ಷಾಭಿಮಾನಿಗಳು: ಸಂಸ್ಮರಣೆ, ತಾಳಮದ್ದಲೆ

Must read

ಬಂಟ್ವಾಳ : ಬಂಟ್ವಾಳ ತಾಲೂಕು ಕೊಯಿಲ ಅಣ್ಣಳಿಕೆ ಯಕ್ಷಾಭಿಮಾನಿಗಳು ಇದರ ವತಿಯಿಂದ 11ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಹಿರಿಯ ಯಕ್ಷಗಾನ ಅರ್ಥದಾರಿ ದಿ.ರಮೇಶ್‌ಭಟ್‌ಮಾದೇರಿ ಅವರ ಸಂಸ್ಮರಣೆ ಕೊಯಿಲ ಅಣ್ಣಳಿಕೆ ವಿಘ್ನೇಶ್ವರ ಸಭಾ ಭವನದಲ್ಲಿ ಜರಗಿತು.
ಕೊಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ್ ಬಲ್ಲಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಮೇಶ್ ಭಟ್ ಅವರು ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಪ್ರೋತ್ಸಾಹಕರಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ನೇರ,ದಿಟ್ಟ ನಡೆ ನುಡಿಯ ಮೃದು ಹೃದಯದ ಧೀಮಂತ ವ್ಯಕ್ತಿಯಾಗಿದ್ದರು. ಹಿರಿಯರ ಶ್ರಮ, ಸಾಧನೆ ಮುಂದಿನ ತಲೆಮಾರಿಗೆ ದಾರಿದೀಪವಾಗಿದ್ದು, ಅವರ ಸಂಸ್ಮರಣೆ ಉತ್ತಮ ಕಾರ್ಯ ಎಂದರು.
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರ.ಅರ್ಚಕ ರಾಮಚಂದ್ರ ಹ್ಥಿಠಿ ॒ ಅವರು ಸಂಸ್ಮರಣೆ ಮಾಡಿ ಮಾತನಾಡಿ, ಸತ್ಕಾರ್ಯಗಳಿಂದ ಕೀರ್ತಿ ಗಳಿಸಿದವರು ಅಳಿದ ಬಳಿಕವೂ ಸ್ಮರಣೀಯರು. ಯಕ್ಷಗಾನದ ಜತೆ ಸಮಾಜಮುಖಿ ಕಾರ್ಯಗಳಿಂದ ರಮೇಶ್ ಭಟ್ ಅವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಹಿರಿಯ ಯಕ್ಷಗಾನ ಕಲಾವಿದ, ಅರ್ಥದಾರಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಮಾತನಾಡಿ, ರಮೇಶ್ ಭಟ್ ಅವರು ಕಲಾಪ್ರಜ್ಞೆಯ ಜೊತೆ ಸಾಮಾಜಿಕ ಪ್ರಜ್ಞೆಯನ್ನು ಮೆರೆಸಿದವರು. ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸುವ ದೊಡ್ಡಗುಣ ಅವರದಾಗಿತ್ತು ಎಂದು ಹೇಳಿದರು. ಪ್ರಗತಿಪರ ಕೃಷಿಕ ನೋಣಯ್ಯ ಶೆಟ್ಟಿಗಾರ್, ಉಪನ್ಯಾಸಕ ಪ್ರದೀಪ್ ಭಟ್ ಮಾದೇರಿ, ಯಕ್ಷಗಾನ ಸಂಘಟಕ ಹರಿಪ್ರಸಾದ್ ರಾವ್ ಸಿದ್ದೈಕೋಡಿ, ನ್ಯಾಯವಾದಿ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸಮಿತಿಯ ಸುರೇಶ್ ಅಣ್ಣಳಿಕೆ, ಚಂದ್ರಹಾಸ ಅಣ್ಣಳಿಕೆ, ರಾಜಕುಮಾರ್ ಶೆಟ್ಟಿಗಾರ್, ಅಂಕಿತಾ, ಆಕಾಶ್,ಸುಮಿತ್ರಾ ಆರ್.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿ, ಪ್ರಸ್ತಾವಿಸಿ, ವಂದಿಸಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭರತಾಗಮನ, ರಾವಣವಧೆ ತಾಳಮದ್ದಳೆ ನಡೆಯಿತು.

More articles

Latest article