


ವಿಟ್ಲ: ಜಗತ್ತಿನೊಳಗೆ ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ತುಲನಾತ್ಮಕ ವ್ಯವಸ್ಥೆಯಿದ್ದು, ನಾವು ಮಾಡುವ ಕಾರ್ಯ ಬದುಕಿನ ಮೌಲ್ಯವನ್ನು ದಾಖಲಿಸುತ್ತದೆ. ಪರಿಶುದ್ಧ ಭಾವನೆಯ ಮೂಲಕ ಮಾಡುವ ಕಾರ್ಯಕ್ಕೆ ಸದಾ ಭಗವಂತನ ಅನುಗ್ರಹವಿದೆ. ಪ್ರತಿಯೊಬ್ಬರೂ ಆಂತರಿಕ ಸತ್ವ ತತ್ವದೊಂದಿಗೆ ಬದುಕುವ ಅವಶ್ಯಕತೆ ಇದೆ ಎಂದು ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ನಡೆದ 20ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪೂರ್ವಿಕರ ಸಿದ್ಧಾಂತಗಳನ್ನು ಮರೆತು ಮುನ್ನಡೆಯುತ್ತಿರುವುದು, ದೇಶದ ಅವನತಿಗೆ ಕಾರಣವಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾದಾಗ ದೇಶ ಸಶಕ್ತವಾಗುವುದು ಎಂದರು.
ಮೂಡುಬಿದಿರೆ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಪ್ರತಿಯೊಬ್ಬರಲ್ಲಿಯೂ ಮಾತೃ ಹೃದಯವಿದ್ದಾಗ ಸ್ವಸ್ಥ ಸಮಾಜ ನಿರ್ಮಾಣವಾಗಬಹುದು. ಸರ್ವರ ಹಿತಕ್ಕಾಗಿ ನಿತ್ಯ ಪ್ರಾರ್ಥನೆ ನಡೆಸುವ ಕ್ಷೇತ್ರ ಮಾಣಿಲದ ವಿಶೇಷತೆ ಎಂದು ಹೇಳಿದರು.
ಉದ್ಯಮಿ ಭಾಸ್ಕರ್ ಶೆಟ್ಟಿ ಪುಣೆ, ತುಳು ವಿದ್ವಾಂಸ ದಯಾನಂದ ಕತ್ತಲ್ ಸಾರ್, ಸತ್ಸಂಗ ಸಮಿತಿಯ ವಾಸುದೇವ ಆರ್ ಕೊಟ್ಟಾರಿ, ಶ್ರೀಧಾಮ ಮಹಿಳಾ ಸೇವಾ ಸಮಿತಿಯ ಗೌರವಾಧ್ಯಕ್ಷೆ ದೀಪಾ ಅರವಿಂದ ರೈ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕರುಣಾಕರ ಶೆಟ್ಟಿ ಬೋಳಾರ, ಶ್ರೀ ಮಹಾಲಕ್ಷ್ಮೀ ಸೇವಾ ಟ್ರಸ್ಟ್ನ ಟ್ರಸ್ಟಿಗಳಾದ ಚಂದ್ರಶೇಖರ ತುಂಬೆ, ರಮೇಶ್ ಪಣೋಲಿಬೈಲು, ಮಚ್ಚೇಂದ್ರನಾಥ ಸಾಲ್ಯಾನ್, ಶ್ರೀಧಾಮ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ಸೇವಾ ಸಮಿತಿ ಕಾರ್ಯದರ್ಶಿ ಗೀತಾಪುರುಷೋತ್ತಮ್ ಪ್ರಾರ್ಥಿಸಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಮಂಜು ವಿಟ್ಲ ವಂದಿಸಿದರು.
ಬೆಳಗ್ಗೆ ಕ್ಷೇತ್ರದಲ್ಲಿ ಗಣಪತಿ ಹೋಮ, ಪಂಚಾಮೃತಾಭಿಷೇಕ, ನವಗ್ರಹ ಶಾಂತಿ ಹವನ, ಅಷ್ಟಲಕ್ಷ್ಮೀಯಾಗ, ಮಹಾಚಂಡಿಕಾಯಾಗ, ಸೌಂದರ್ಯ ಲಹರೀ ಯಾಗ, ದತ್ತಯಾಗ, ಮಾಣಿಲ ಶ್ರೀಗಳಿಂದ ಮಧುಕರಿ, ಸ್ವರ್ಣಮಂತ್ರಾಕ್ಷತೆ ನಡೆಯಿತು.
ವಿಟ್ಲ: ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಬುಧವಾರ ನಡೆದ 20ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಸಮಾಪನ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ಮಧುಕರಿ ಭಿಕ್ಷಾ ಸೇವೆ ನಡೆಯಿತು.


