ಬಂಟ್ವಾಳ: ಆಧುನಿಕ ಜಗತ್ತು ಸ್ಪರ್ಧಾತ್ಮಕ ಜಗತ್ತಾಗಿದೆ. ಇಂದು ಪ್ರತಿಯೊಬ್ಬನೂ ತನ್ನ ಬದುಕನ್ನು ಸ್ಪರ್ಧೆಗೊಡ್ಡಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲೂ ಸ್ಪರ್ಧೆಯನ್ನು ಎದುರಿಸಬೇಕು. ಪಠ್ಯದಷ್ಟೇ ಮಹತ್ವನ್ನು ಪಠ್ಯೇತರ ಚಟುವಟಿಕೆಗೂ ಗಮನವನ್ನು ವಿದ್ಯಾರ್ಥಿ ನೀಡಬೇಕು. ಆಗ ಮಾತ್ರ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದು ವಾಮಂಜೂರಿನ ಸಂತ ಜೋಸೆಪ್ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ| ವಿನ್ಸೆಂಟ್ ಕ್ರಾಸ್ತಾ ಹೇಳಿದರು.
ಅವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಸ್ಟಾರ್ ಕಾಲೇಜು ಸ್ಕೀಮ್ ಪ್ರಾಯೋಜಕತ್ವದಲ್ಲಿ ನಡೆದ ಅಂತರ್ ಕಾಲೇಜು ವಿಜ್ಞಾನ ಸಂಬಂಧಿ ವಿವಿಧ ಸ್ಪರ್ಧೆಗಳು ’ಸೈನ್ಸ್ ವಿಸ್ತಾ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ಟಾರ್ ಕಾಲೇಜು ಸ್ಕೀಮ್ನ ಮಾನ್ಯತೆಯು ವಿಜ್ಞಾನ ವಿಭಾಗಗಳ ಬೆಳವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ. ಜಿಲ್ಲೆಯ ಪ್ರತಿಷ್ಠಿತ ಕಾಲೇಜಾದ ಎಸ್.ವಿ.ಎಸ್ ಕಾಲೇಜಿಗೆ ಈ ಮಾನ್ಯತೆ ಪಡೆದಿರುವುದು ಗಮನಾರ್ಹ ಸಂಗತಿ. ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಗೆ ಇದು ಹೆಚ್ಚು ಸಹಕಾರಿ ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಉಪಪ್ರಾಂಶುಪಾಲರು ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ| ಹೆಚ್ ಆರ್ ಸುಜಾತ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ಸ್ಟಾರ್ ಕಾಲೇಜು ಸ್ಕೀಮ್ನ ಸಂಯೋಜಕರಾದ ಶ್ರುತಿ ವಂದಿಸಿದರು. ವಿದ್ಯಾರ್ಥಿನಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಮಾನಸ ಪ್ರಾರ್ಥಿಸಿದರು.