ಬಂಟ್ವಾಳ: ಕಲಾಶ್ರೀ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿಭೆಗಳಿಗೆ ತಾಲೂಕು ಮಟ್ಟದಲ್ಲಿಯೇ ಸೂಕ್ತ ವೇದಿಕೆ ನಿರ್ಮಾಣವಾಗಬೇಕಾಗಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಹೇಳಿದ್ದಾರೆ.
ಅವರು ಸೋಮವಾರ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಹಾಗೂ ಬಂಟ್ವಾಳ ತಾಲೂಕು ಬಾಲಭವನ ಸಮಿತಿಯ ಜಂಟಿ ಆಶ್ರಯದಲ್ಲಿ 2019ನೇ ಸಾಲಿನ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮಲ್ಲಿ ವಿಶೇಷ ಪ್ರತಿಭೆಗಳನ್ನು ಹೊಂದಿರುವ ಮಕ್ಕಳಿದ್ದು, ಇಂತಹ ಕಾರ್ಯಕ್ರಮಗಳನ್ನು ತಳ ಮಟ್ಟದಲ್ಲಿಯೇ ಉತ್ತಮ ವೇದಿಕೆ ಕಲ್ಪಿಸಬೇಕಾಗಿದೆ. ಆಗ ಮಾತ್ರ ವಿದ್ಯಾರ್ಥಿಗಳಿಗೆ ವೇದಿಕೆ ಭಯ ದೂರವಾಗಲು ಸಾಧ್ಯವಾಗುತ್ತದೆ. ಕಲಾಶ್ರೀಯಂತಹ ಕಾರ್ಯಕ್ರಮಗಳು ಪ್ರತೀ ಶಾಲೆಗಳಲ್ಲಿ ನಡೆಯಲಿ ಎಂದರು.
ಪ್ರಸ್ತುತ ದಿನಗಳಲ್ಲಿ ಪ್ರತಿಭೆಗಳಿಗೆ ಅವಕಾಶವಿದ್ದು, ಸ್ಪರ್ಧಾತ್ಮಕವಾಗಿದೆ. ವೇದಿಕೆಯಲ್ಲಿ ಪ್ರತಿಭೆಯನ್ನು ತೋಪರ್ಡಿಸುವುದು ಮಾತ್ರವಾಗಿರದೇ ವೀಕ್ಷಕರನ್ನು ಎದುರಿಸುವ ತರಬೇತಿಯನ್ನು ಕೂಡಾ ಮಕ್ಕಳಿಗೆ ನೀಡಬೇಕಾಗಿದೆ ಎಂದರು.
ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು.
ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಶಿಕ್ಷಕ ರಾಮಚಂದ್ರ ಉಪಸ್ಥಿತರಿದ್ದರು.
ವಿಟ್ಲ ಸಿಡಿಪಿಒ ಸುಧಾ ಜೋಶಿ ಪ್ರಸ್ತಾವಿಸಿದರು.
ಶಿಶು ಅಭಿವೃದ್ಧಿಯ ಯೋಜನಾಧಿಕಾರಿ ಶ್ರೀಲತಾ ಎಸ್. ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ವಂದಿಸಿದರು. ಹಿರಿಯ ಮೇಲ್ವಿಚಾರಕಿ ಭಾರತಿ ಕುಂದರ್ ನಿರೂಪಿಸಿದರು.
ಪತ್ರಕರ್ತರಾದ ಸಂದೀಪ್ ಸಾಲ್ಯಾನ್, ಗೋಪಾಲ್ ಅಂಚನ್, ಶಿಕ್ಷಕ ರಾದ ವಿಠಲ ನಾಯ್ಕ್, ರಾಮಚಂದ್ರರಾವ್, ಚಿತ್ರಕಲಾ ಶಿಕ್ಷಕರಾದ ಚೆನ್ನಕೇಶವ, ಮುರಳಿಕೃಷ್ಣ ತೀರ್ಪುಗಾರರಾಗಿ ಸಹಕರಿಸಿದರು.