ಬಂಟ್ವಾಳ, ಸೆ. ೭: ದ.ಕ. ನಿರ್ಗಮನ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ರಾಜೀನಾಮೆ ತಕ್ಷಣ ಅಂಗೀಕರಿಸಿ, ಆಂತರಿಕ ತನಿಖೆ ನಡೆಸುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಮುಖ್ಯಮಂತ್ರಿ ಅವರಲ್ಲಿ ಮನವಿ ಮೂಲಕ ಆಗ್ರಹಿಸಿದ್ದಾರೆ.
ರಾಜೀನಾಮೆಗೆ ಭಾರತೀಯ ಸಂವಿಧಾನಕ್ಕೆ ಧಕ್ಕೆ ಬರುವ ಸನ್ನಿವೇಶಗಳು ಕೇಂದ್ರ ಸರಕಾರದಿಂದ ನಡೆಯುತ್ತಿವೆ. ನಮ್ಮ ವೈವಿಧ್ಯಮಯ ಪ್ರಜಾಪ್ರಭುತ್ವದ ಮೂಲ ಸ್ತಂಭಗಳು ಹಿಂದೆಂದೂ ಕಾಣದ ರೀತಿಯಲ್ಲಿ ರಾಜಿಯಾಗುತ್ತಿವೆ. ಅದೇ ರೀತಿ ಕೇಂದ್ರ ಸರಕಾರ ಇತೀಚೆಗೆ ಜಾರಿಗೊಳಿಸಿದ ಕೆಲವು ದೋರಣೆಗಳು, ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ೩೭೦, ೩೫/ಎ ರದ್ದತಿ, ತ್ರಿವಳಿ ತಲಾಖ್ ನಿಷೇಧ, ಶ್ರೀರಾಮ ಮಂದಿರ ನಿರ್ಮಾಣದಂತಹ ಐತಿಹಾಸಿಕ ತಿರ್ಮಾನಗಳು ಭಾರತೀಯರ ಬಹುಕಾಲದ, ಬಹುಜನರ ಬೇಡಿಕೆಗಳಾಗಿದ್ದವು. ಇದನ್ನೆಲ್ಲ ಸಹಿಸಲು ಸಾಧ್ಯವಾಗದೇ ರಾಜೀನಾಮೆ ಕೊಟ್ಟಿರುವುದು ಎಂಬ ಅವರ ಹೇಳಿಕೆ ವಿಷಾದನೀಯ ಹಾಗೂ ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ದೇಶದ ಅತ್ಯುನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಜಿಲ್ಲಾಧಿಕಾರಿ ಹೀಗೆ ದೇಶದ ಬಗ್ಗೆ ಮತ್ತು ಕೇಂದ್ರ ಸರಕಾರದ ನಿಯಾಮಾವಳಿ, ನೂತನ ಕಾನೂನು ಚೌಕಟ್ಟುಗಳ ಕುರಿತು ಸಾರ್ವತ್ರಿಕ ಪ್ರತಿಕ್ರಿಯೆ ನೀಡುತ್ತಿರುವುದು ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ಸಾರ್ವಜನಿಕ ವಲಯದಲ್ಲಿ ಪರಿಗಣಿಸಲ್ಪಟ್ಟಿದೆ. ಕೇಂದ್ರ ಸರಕಾರದ ಅಡಿಯಲ್ಲಿ ಕೇಂದ್ರ ಲೋಕಾಸೇವಾ ಆಯೋಗದ ಮೂಲಕ ನಡೆಯುತ್ತಿರುವ ದೇಶದ ಅತ್ಯುನ್ನತ ಮತ್ತು ಪ್ರಾಮುಖ್ಯ ನಾಗರಿಕ ಸೇವಾ ಹುದ್ದೆಗಳಾದ ಐಎಎಸ್., ಐಪಿಎಸ್ ಅಂತಹ ಹುದ್ದೆಗಳಿಗೆ ನೇಮಕಾತಿ ಆಯ್ಕೆ ಮಾಡುವಲ್ಲಿ ಕೊನೆಯ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳೆಲ್ಲರ ಪೂರ್ವಪರ ಸಮಗ್ರ ಆಂತರಿಕ ತನಿಖೆ ಮಾಡುವ ಅಗತ್ಯವಿದ್ದು, ಈ ವಿಷಯದ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ಅವರು ಪತ್ರದ ಮೂಲಕ ಕೋರಿದ್ದಾರೆ.
ಸಾರ್ವಜನಿಕ ಹಿತಾದೃಷ್ಟಿಯಿಂದ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರಜ್ಞಾವಂತ ಜನಸಾಮಾನ್ಯರಿಗೆ ಜಿಲಾಧಿಕಾರಿ ರಾಜೀನಾಮೆ ವಿಷಯದ ಬಗ್ಗೆ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವರೇ ಜಿಲ್ಲಾಧಿಕಾರಿ ಅವರ ರಾಜೀನಾಮೆ ಅಂಗೀಕರಿಸುವುದರೊಂದಿಗೆ ಅವರನ್ನು ಆಂತರಿಕವಾಗಿ ತನಿಖೆಗೆ ಒಳಪಡಿಸಿ ತನಿಖಾ ವರದಿಯನ್ನು ಶೀಘ್ರವಾಗಿ ಪ್ರಕಟಿಸುವಂತೆ ಆಗ್ರಹಿಸಿದ್ದಾರೆ