ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇವರ ಸಹಯೋಗದಲ್ಲಿ ಬಿ.ಸಿ.ರೋಡಿನ ರೋಟರಿ ಕ್ಲಬ್ ನಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ. ಬಂಗೇರ ಅವರು, ಪೌಷ್ಟಿಕ ಆಹಾರದ ಕೊರತೆಯಿಂದ ಅಗುವ ಸಾವುನೋವುಗಳನ್ನು ಕಡಿಮೆ ಮಾಡಲು ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಅತೀ ಅಗತ್ಯ ವಾಗಿದೆ ಎಂದು ಹೇಳಿದರು.
ಆರೋಗ್ಯವಂತ ಮಹಿಳೆಯಿಂದ ಆರೋಗ್ಯ ಯುತವಾದ ಸಮಾಜ ನಿರ್ಮಾಣ ಸಾಧ್ಯ. ಪೌಷ್ಟಿಕ ಆಹಾರದ ಬಗ್ಗೆ ಪ್ರತಿಯೊಬ್ಬರು ಮಹಿಳೆಯರು ತಿಳಿದುಕೊಂಡು ಆರೋಗ್ಯವನ್ನು ಕಾಪಾಡುವಂತೆ ಮಹಿಳೆಯರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆಸ್ತಿ ಅಂತಸ್ತು ಮುಖ್ಯವಲ್ಲ, ಆರೋಗ್ಯ ವೇ ಮುಖ್ಯ ಎಂದು ಅವರು ಹೇಳಿದರು.
ಮನೆಯಲ್ಲಿ ತಯಾರಿಸಿದ ಸಾವಯವ ಪೌಷ್ಟಿಕ ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ರುಚಿಯ ಆಹಾರಕ್ಕಿಂತ ಹೆಚ್ಚಾಗಿ ಆರೋಗ್ಯ ಕ್ಕೆ ಪೂರಕವಾದ ಉತ್ತಮ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ಎಂದು ಅವರು ತಿಳಿಸಿದರು. ಸರಕಾರದ ಕಾರ್ಯಕ್ರಮ ಯಶಸ್ಸು ಕಾಣಲು ಪ್ರತಿಯೊಬ್ಬರಿಗೂ ಮಹತ್ತರ ಜವಬ್ದಾರಿ ಇದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಾತನಾಡಿ ಆರೋಗ್ಯವನ್ನು ಮಹಿಳೆಯರು ಕಾಪಾಡಿಕೊಂಡು ಬಂದಾಗ ಪ್ರತಿಯೊಂದು ಮನೆಯೂ ಆರೋಗ್ಯ ವಂತಾಗಿರುತ್ತದೆ. ಆರೋಗ್ಯ ನಮ್ಮ ಮೊದಲ ಆಧ್ಯತೆಯಾಗಿರಲಿ. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ
ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಅವರು ಮಾತನಾಡಿ ನಿರ್ದಿಷ್ಟ ಪೌಷ್ಟಿಕ ಆಹಾರ, ಸರಿಯಾದ ಸಮಯದಲ್ಲಿ ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ತಿಳಿಸಿದರು. ತಾಯಿ ಮತ್ತು ಮಗುವಿನ ಮರಣವನ್ನು ತಡೆಗಟ್ಟಲು ಪ್ರಮುಖವಾಗಿ ರಕ್ತಹೀನತೆಯನ್ನು ತಡೆಗಟ್ಟಲು ಪ್ರಥಮವಾಗಿ ಮಹಿಳೆಯರು ಮುಂದಾಗಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗಾ, ಕಾರ್ಯದರ್ಶಿ ಸ್ಮಿತಾ, ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ರೈ ಉಪಸ್ಥಿತರಿದ್ದರು. ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಪ್ರಸ್ತಾವಿಕವಾಗಿ ಮಾತನಾಡಿದರು.
ಮೇಲ್ವಿಚಾರಕಿ ಇಂದಿರಾ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ಲೇವಿ ಡಿಸೋಜ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.