ಬಂಟ್ವಾಳ: ಕಳೆದ 18 ತಿಂಗಳಿನಿಂದ ಪ್ರತಿದಿನ 40 ಲೀ.ಹಾಲು ಕೊಡುತ್ತಿದ್ದರೂ ಬಂಟ್ವಾಳ ತಾಲೂಕಿನ ಸೋರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ಸದಸ್ಯತ್ವ ನೀಡಲು ನಿರಾಕರಿಸುತ್ತಿದ್ದು, ಪರಿಣಾಮವಾಗಿ ಸರಕಾರದ ಪ್ರೋತ್ಸಾಹಧನ ಸಹಿತ ವಿವಿಧ ಸವಲತ್ತಿನಿಂದ ವಂಚಿತಳಾಗಿದ್ದೆನೆ ಎಂದು ಸ್ಥಳೀಯ ಹೈನುಗಾರಿಕಾ ಕೃಷಿಕ ಲಿಲ್ಲಿ ಮೇರಿ ರೋಡ್ರಿಗಸ್ ಅವರು ಆಳಲು ತೋಡಿಕೊಂಡಿದ್ದಾರೆ. ಬುಧವಾರ ಬಂಟ್ವಾಳ ಪ್ರಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸದಸ್ಯರಾಗಿ ನೋಂದಾಯಿಸಲು ಹಲವು ಬಾರಿ ಅರ್ಜಿ ಮೂಲಕ ಮನವಿ ಸಲ್ಲಿಸಿದರೂ ಸದಸ್ಯತ್ವ ನೀಡಲು ಸತಾಯಿಸುತ್ತಿದ್ದಾರೆ.ಈಬಗ್ಗೆ ಸಹಕಾರಿ ಸಂಘದ ಅಧಿಕಾರಿಗಳಿಗೂ ನಿರಂತರ ಅರ್ಜಿಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಸುಮಾರು 4.50 ಲಕ್ಷ ರೂ.ಮೌಲ್ಯದ ಹಾಲನ್ನು ಸೋರ್ನಾಡು ಹಾ.ಉ.ಸ.ಸಂಘಕ್ಕೆನೀಡುತ್ತಾ ಬಂದಿದ್ದೇನೆ ಆದರೆ ತನ್ನನ್ನ ಉದ್ದೇಶಪೂರ್ವಕವಾಗಿ ಸದಸ್ಯಳನ್ನಾಗಿ ನೋಂದಾಯಿಸದೆ ಸಂಘದ ವಾರ್ಷಿಕ ಧನಸಹಾಯ ನೀಡದೆ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯವರು ಅನ್ಯಾಯವೆಸಗಿದ್ದಾರೆ ಎಂದು ದೂರಿಕೊಂಡರು. ಈ ವಿಚಾರದಲ್ಲಿ ಸಹಕಾರಿ ಸಂಘಗಳ ಅಧಿಕಾರಿ ವರ್ಗವು ನನಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದರ ಹಿಂದೆ ಕಾಣದ’ ಕೈ’ ಗಳು ಕೆಲಸ ಮಾಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ ಅವರು ಇದರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ಲಿಲ್ಲಿ ಮೇರಿ ರೋಡ್ರಿಗಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಲಿಲ್ಲಿ ಅವರ ಪತಿ ಡೋನಾಲ್ಡ್ ಪಿಂಟೋ ಅವರು ಮಾತನಾಡಿ ಎರಡು ವರ್ಷದ ಹಿಂದೆ ಆಚಾರಿಪಲ್ಕೆ ಹಾ.ಉ.ಸ.ಸಂಘದಲ್ಲಿ ಸದಸ್ಯತ್ವ ಹೊಂದಿದ್ದು,ಬಳಿಕ ಸಂಘದ ಕಾರ್ಯಕಾರಿ ಮಂಡಳಿಯ ನಿರ್ದೇಶಕನಾಗಿದ್ದೆ.ಬಳಿಕ ತನ್ನ ಮನೆ ಮತ್ತು ಸಂಘದ ಕಾರ್ಯವ್ಯಾಪ್ತಿ ಸೋರ್ನಾಡು ಹಾಲು ಉತ್ಪಾದಕರ ಸಂಘದ ವ್ಯಾಪ್ತಿಗೆ ಒಳಪಟ್ಟ ಹಿನ್ನಲೆಯಲ್ಲಿ ಆಚಾರಿಪಲ್ಕೆ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘದ ಸದಸ್ಯತ್ವವನ್ನು ರದ್ದುಪಡಿಸುವಂತೆ ಕೋರಿದ್ದೆ.ಅದರಂತೆ ಸದಸ್ಯತ್ವ ರದ್ದಾಗಿರುತ್ತದೆ ಎಂದರು. ಇದೇ ಕಾರಣ ಮುಂದಿಟ್ಟು ತನ್ನ ಪತ್ನಿಗೆ ಸದಸ್ಯತ್ವ ನೀಡಲು ಸೋರ್ನಾಡು ಸಂಘವು ನಿರಾಕರಿಸುತ್ತಿದೆ.ಆದರೆ ಇಲ್ಲಿನ ಆಲ್ಪೋನ್ಸ್ ರವರ ಪತ್ನಿ ಐರಿನ್ ಹಾಗೂ ಕೃಷ್ಣಪ್ಪ ರವರ ಪತ್ನಿ ಸಹಿತ ಹಲವರಿಗೆ ಸದಸ್ಯತ್ವ ನೀಡಲಾಗಿದೆ ಇದು ಸಂಘದ ನಿಯಮಕ್ಕೆ ವಿರುದ್ದವಾಗಿದೆ ಇದನ್ನು ಪ್ರಶ್ನಿಸಿದ ನನಗೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ದಿನಾಂಕ ನಮೂದಿಸದ ಮಾನಹಾನಿಕಾರಕ ನೋಟೀಸನ್ನು ನೀಡಿದ್ದಾರೆ ಇದಕ್ಕೆ ಪ್ರತ್ಯತ್ತರ ನೀಡಲಾಗಿದೆ ಎಂದರು.



ಹಾಲು ಹಾಕದವರು ಅಧ್ಯಕ್ಷರು!; ನಿಯಾಮಾವಳಿಯಂತೆ ಸಂಘದ ಸದಸ್ಯರಾಗಬೇಕಾದವರು 180 ದಿನ ಸೊಸೈಟಿಗೆ ಹಾಲು ಹಾಕಬೇಕು,ಎರಡೂವರೆ ಸಾವಿರ ರೂ.ವಿನ ವ್ಯವಹಾರ ನಡೆಸಬೇಕು ಮತ್ತು ಆ ಸಂಘದ ವ್ಯಾಪ್ತಿಗೆ ಸೇರಿರಬೇಕು ಆದರೆ ಸೋರ್ನಾಡು ಮತ್ತು ಆಚಾರಿಪಲ್ಕೆ ಹಾ.ಉ.ಸ.ಸಂಘದ ಅಧ್ಯಕ್ಷರಿಬ್ಬರು ಕೂಡ ಸಂಘಕ್ಕೆ ಹಾಲು ಹಾಕುತ್ತಿಲ್ಲ.. ಆದೇ ರೀತಿ ಹಾಲು ಹಾಕದವರು,ಸಂಘದ ವ್ಯಾಪ್ತಿಯಲ್ಲಿಲ್ಲದವರನ್ನು ಇಲ್ಲಿ ಸದಸ್ಯರನ್ನಾಗಿಸಲಾಗಿದೆ.ಆಚಾರಿಪಲ್ಕೆ ಸಂಘದ ಕಟ್ಟಡ ನಿರ್ಮಾಣದಲ್ಲೂ ಗೋಲ್ ಮಾಲ್ ನಡೆದಿದೆ.ಈ ಸಂಘದ ಮಾಹಿತಿಯಂತೆ 54 ಮಂದಿ ಸದಸ್ಯರನ್ನು ಹೊಂದಿದ್ದು,ಮತದಾರರಪಟ್ಟಿಯಲ್ಲಿ 61 ಮಂದಿ ಇದ್ದಾರೆ ಆದರೆ ಧನಸಹಾಯ 81 ಮಂದಿಗೆ ವಿತರಿಸಲಾಗಿದ್ದು,ಹಾಲು ಹಾಕುವವರು 100 ಮಂದಿ ಇದ್ದಾರೆನ್ನತ್ತಾರೆ ಎಂದು ದಾಖಲೆ ಸಹಿತ ವಿವರ ಬಿಚ್ಚಿಟ್ಟರು ಡೋನಾಲ್ಡ್ ಪಿಂಟೋ ರವರು.
2017-18 ನೇ ಸಾಲಿನಲ್ಲಿ ಆಚಾರಿಪಲ್ಕೆ ಸಂಘಕ್ಕೆ 2.19.361ಲಕ್ಷ ರೂ.ಲಾಭಾಂಶ ಬಂದಿದೆ ಎಂದು ಹೇಳಲಾಗುತ್ತಿದ್ದು,1.04.800 ಲಕ್ಷ ರೂ.ವನ್ನು ಸದಸ್ಯರಿಗೆ ಶೇ.65 ರಂತೆ ಹಂಚಲಾಗಿದೆ ಎಂದು ವಿವರಿಸಲಾಗಿದ್ದು,ಈ ಶೇಕಡವಾರು ಲೆಕ್ಕಾಚಾರದಂತೆ ಬಾಕಿ 40 ಸಾ.ರೂ.ವಿನಷ್ಟು ಹಣ ಯಾರ ಖಾತೆಗೆ ಸೇರಿದೆ ಎಂಬುದು ನಿಗೂಢವಾಗಿದೆ ಎಂದು ಅವರು ಈ ಎರಡು ಸೊಸೈಟಿಯಲ್ಲಾಗುವ ಅವ್ಯವಹಾರಕ್ಕೆ ಬಂಟ್ವಾಳ ವಲಯದ ಸಹಕಾರಿ ಅಭಿವೃದ್ದಿ ಅಧಿಕಾರಿ ಬೆಂಗಾವಲಾಗಿ ನಿಂತಿದ್ದಾರೆ ಎಂದು ಡೋನಾಲ್ಡ್ ನೇರ ಆರೋಪಿಸಿದರು.
ಹೈನುಗಾರರನ್ನು ಪ್ರೋತ್ಸಾಹಿಸಬೇಕಾದ ಸಹಕಾರ ಸಂಘದ ರಾಜ್ಯ,ಜಿಲ್ಲೆಯ ಉನ್ನತ ಅಧಿಕಾರಿಗಳು ಹೈನುಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ.ಇದರಿಂದಾಗಿ ಹೈನುಗಾರರು ದನಗಳನ್ನು ಮಾರಾಟ ಮಾಡದೆ ವಿಧಿಯಿಲ್ಲದಂತಾಗಿದ್ದು,ಈ ಸನ್ನಿವೇಶ ಉಂಟಾಗಲು ಸಹಕಾರ ಸಂಘದ ಅಧಿಕಾರಿಗಳೇ ಕಾರಣ ಎಂದು ಗಂಭೀರ ಆರೋಪ ವ್ಯಕ್ತಪಡಿಸಿದರು.
ಹಲ್ಲೆಗೆ ಯತ್ನಿಸಿದ್ದರು: ಕೆಲ ಸಮಯದ ಹಿಂದೆ ಈ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಗೂಂಡಾಗಳು ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದರು.ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದೆನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಹೈನುಗಾರ ಅಲ್ಬನ್ ಪಿಂಟೋ ಸುದ್ದಿಗೋಷ್ಟಿಯಲ್ಲಿದ್ದರು.