Thursday, October 26, 2023

ಸಿದ್ದಕಟ್ಟೆ : ಜವನೆರೆ ತುಡರ್ ಟ್ರಸ್ಟ್ ಮಂಥನ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ

Must read

ಬಂಟ್ವಾಳ: ಸಾಮಾಜಿಕ ಸೇವಾ ಸಂಸ್ಥೆ ಜವನೆರೆ ತುಡರ್ ಟ್ರಸ್ಟ್ ಇದರ ಸಿದ್ದಕಟ್ಟೆ ವಲಯ ಸಮಿತಿ ವತಿಯಿಂದ ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ, ರಕ್ತದಾನ ಶಿಬಿರ, ನೇತ್ರದಾನ ನೊಂದಾವಣೆ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಂಥನ 2019 ರವಿವಾರ ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಾಳಿನಲ್ಲಿ ಪಡೆಯುವ ಖ್ಯಾತಿಗಿಂತಲೂ ಅಳಿದ ಮೇಲೂ ಉಳಿಯುವಂತಾಗುವ ಕೀರ್ತಿ ಶ್ರೇಷ್ಠವಾಗಿದೆ. ಆದುದರಿಂದ ಜೀವನದಲ್ಲಿ ಮೌಲ್ಯಯುತ ಉತ್ತಮ ಕಾರ್ಯಗಳನ್ನು ನಡೆಸಬೇಕು ಎಂದು ಹೇಳಿದರು.
ಯುವ ಜನತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಮಾಜಿಕ ಅಭಿವೃದ್ಧಿಗೆ ಪರಿಶ್ರಮಿಸುವುದು ಉತ್ತಮ ಕಾರ್ಯವಾಗಿದೆ. ಯುವ ಜನತೆಯ ಅಂತ:ಶಕ್ತಿ ತಾನು ಉರಿದು ಇತರರಿಗೆ ಬೆಳಕು ನೀಡುವ ಸದುದ್ದೇಶದ, ಯುವ ಜನತೆಯನ್ನು ಸಮಾಜದ ಬೆಳಕಾಗಿಸುವ ಜವನೆರೆ ತುಡರ್ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಮುಂಬಯಿ ಉದ್ಯಮಿ ಶ್ರೀನಿವಾಸ ಸಾಫಲ್ಯ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಪುರಾಣದಲ್ಲಿ ಸಮುದ್ರ ಮಂಥನದಿಂದ ಉದ್ಭವಿಸಿದ ಉತ್ತಮ ವಸ್ತುಗಳಂತೆ ಮಂಥನ ಕಾರ್ಯಕ್ರಮದಿಂದ ಉತ್ತಮ ವಿಚಾರಗಳು ಮೂಡಿಬಂದು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ ಎಂದು ಹೇಳಿದರು.
ಸಿದ್ದಕಟ್ಟೆಯ ವೈದ್ಯ ಡಾ| ಪ್ರಭಾಚಂದ್ರ ಜೈನ್, ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ರಕ್ತನಿಧಿ ಮುಖ್ಯಸ್ಥ ಎಡ್ವರ್ಡ್‌ವಾಸ್, ಪ್ರತಿನಿಽ ಪ್ರವೀಣ್, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ನಿಶ್ಚಿತ್ ಶೆಟ್ಟಿ, ರಾಯಿ ಬದನಡಿ ಷಣ್ಮುಖ ಸುಬ್ರಹ್ಮಣ್ಯ ಭಜನ ಮಂಡಳಿ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ, ಜವನೆರೆ ತುಡರ್ ಟ್ರಸ್ಟ್ ಸಿದ್ಧಕಟ್ಟೆ ವಲಯ ಸಂಚಾಲಕ ಸಂತೋಷ್ ಬಂಗೇರ ಉಪಸ್ಥಿತರಿದ್ದರು.
ಟ್ರಸ್ಟ್ ಸಂಚಾಲಕ ಸಂತೋಷ್ ಬಂಗೇರ ಸ್ವಾಗತಿಸಿದರು. ಶರತ್ ಸುವರ್ಣ ನೇತ್ರದಾನ ನೊಂದಾವಣೆ ಪ್ರಮಾಣಪತ್ರ ವಿತರಿಸಿದರು. ದಿನೇಶ್ ಸುವರ್ಣ ಕುದ್ಕೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬೆಳಗ್ಗೆ ರಕ್ತದಾನ ಶಿಬಿರದಲ್ಲಿ 124 ಮಂದಿ ರಕ್ತದಾನ ನೀಡಿದರು. 10 ಗಂಟೆಯಿಂದ ಶೈಕ್ಷಣಿಕ ಕಾರ್ಯಾಗಾರ ನಡೆಯಿತು. ಜೇಸಿ ರಾಷ್ಟ್ರೀಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್ ವ್ಯಕ್ತಿತ್ವ ವಿಕಸನ ಕುರಿತು ಹಾಗೂ ಅಭಿಜಿತ್ ಕರ್ಕೇರ ವೃತ್ತಿ ಮಾರ್ಗದರ್ಶನ ಕುರಿತು ಕಾರ್ಯಾಗಾರ ನಡೆಸಿದರು. ಬಂಟ್ವಾಳ ಎಸ್‌ವಿಎಸ್ ಕಾಲೇಜು ಉಪನ್ಯಾಸಕರಾದ ಚೇತನ್ ಮುಂಡಾಜೆ ಮತ್ತು ಶಿವಪ್ರಸಾದ್ ನೀರಚಿಲುಮೆ ಅವರು ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. 300 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

More articles

Latest article