ಬಂಟ್ವಾಳ: ಕಳೆದ ವರ್ಷ ಜೂನ್ ತಿಂಗಳಲ್ಲಿ ಕುಸಿದು ಬಿದ್ದ
ಮೂಲರಪಟ್ಣ ಸೇತುವೆಯ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಆರೋಪಿಸಿದ್ದಾರೆ.
ಮೂಲರಪಟ್ಣ ಸೇತುವೆಯ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಆರೋಪಿಸಿದ್ದಾರೆ.

ಬಂಟ್ವಾಳ ತಾಲೂಕಿನ ಗಡಿ ಭಾಗ ಮತ್ತು ಮಂಗಳೂರು ತಾಲೂಕಿನ ಸಂಪರ್ಕ ಸೇತುವೆಯಾಗಿದ್ದ ಮೂಲರಪಟ್ಣ ಸೇತುವೆಯು ಕಳೆದ ವರ್ಷ ಜೂನ್ ತಿಂಗಳಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ ಭಾಗವು ಕುಸಿದುಬಿದ್ದು ಸಾರ್ವಜನಿಕ ಸಂಪರ್ಕವೇ ಕಡಿದುಹೋಗಿತ್ತು. ಈ ಸಂದರ್ಭ ಕುಸಿದು ಬಿದ್ದ ಸೇತುವೆಯ ವೀಕ್ಷಣೆಗೆ ಬಂದ ಸರಕಾರದ ಲೋಕೋಪಯೋಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮೇತ ವರ್ಷದೊಳಗೆ ಸೇತುವೆ ಪುನರ್ ನಿರ್ಮಾಣ ಮಾಡಿ ಕೋಡುವ ಭರವಸೆ ನೀಡಿದರೆ ವಿನಹ ಈ ಭರವಸೆ ಮಾತ್ರ ವರ್ಷವಾದರೂ ಈಡೇರಿಲ್ಲ ಎಂದು ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಯವರು ಬೆಂಗಳೂರಿನಲ್ಲಿ ನಡೆದ ಪ್ರಥಮ ಅದಿವೇಶನ ಮತ್ತು ಬೆಳಗಾವಿ ಅದಿವೇಶನದಲ್ಲಿ ಪ್ರಸ್ತಾಪಿಸಿ ಲಭ್ಯ ಅನುದಾನ ವಿನಿಯೋಗಿಸಿ ತುರ್ತು ಕಾಮಗಾರಿ ಆರಂಭಕ್ಕೆ ಮನವಿ ಮಾಡಿದ್ದರೂ ರಾಜ್ಯ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಂತೂ ತನಗೆ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದಾರೆ ಎಂದು ಪ್ರಭು ದೂರಿದ್ದಾರೆ. ಸೇತುವೆ ಕುಸಿದು ಬಿದ್ದು ವರ್ಷ ಕಳೆದರೂ ಮುರಿದುಬಿದ್ದ ಸೇತುವೆಗೆ ಮರುಜೋಡಣೆ ಮಾಡಬಹುದೇ ಅಥವಾ ಹೊಸ ಸೇತುವೆ ನಿರ್ಮಾಣ ಮಾಡಬೇಕೆ ಎಂಬ ಸ್ಪಷ್ಟ ನಿರ್ದಾರಕ್ಕೆ ಬರಲು ಇಲಾಖೆ ಕಾಲಹರಣ ಮಾಡಿದೆ. ಇನ್ನಾದರೂ ಜಿಲ್ಲೆಯಲ್ಲಿ ಸಂಭವಿಸುವ ಅತೀ ತುರ್ತು ಕಾಮಗಾರಿಗಳಿಗೆ ಜಿಲ್ಲಾ ಉಸ್ತುವರಿ ಸಚಿವರು, ಉನ್ನತ ಆಧಿಕಾರಿಗಳು ಗಮನ ನೀಡಬೇಕು, ಮೂಲರಪಟ್ಣ ಸೇತುವೆ ಕಾಮಗಾರಿ ಮುಂದಿನ ವರ್ಷವಾದರೂ ಆರಂಭಗೊಳ್ಳಲಿ ಎಂದು ಅವರು ಆಶಿಸಿದ್ದಾರೆ. ಸೇತುವೆ ಕುಸಿತಗೊಂಡ ಬಳಿಕ ಉಭಯ ತಾಲೂಕಿನ ಗಡಿ ಭಾಗದ ನಾಗರಿಕರು,ಶಾಲಾ ಮಕ್ಕಳು ತೊಂದರೆ ಅನುಭವಿಸು ವಂತಾಗಿತ್ತು . ಈ ಹಿನ್ನಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿನ ಗ್ರಾ.ಪಂ.ಸದಸ್ಯ ರೊಬ್ಬರ ನೇತೃತ್ವದಲ್ಲಿ ಸ್ಥಳೀಯ ಸಂಘಟನೆಯು ಮಣ್ಣಿನ ಕಚ್ಚಾ ರಸ್ತೆ ನಿರ್ಮಿಸಲಾಗಿತ್ತು. ಇದೀಗ ಮಳೆ ಆರಂಭವಾಗಿ ನೀರಿನ ಹರಿವು ಹೆಚ್ಚಾದರಿಂದ ಈ ಕಚ್ಚಾ ರಸ್ತೆಯನ್ನು ತೆರವುಗೊಳಿಸಲಾಗಿದೆ.