Saturday, October 21, 2023

ನಾವು ತಿನ್ನುವ ಆಹಾರದಲ್ಲಿ ವಿಷ ಬೆರೆತಿದೆ: ಕೃಷ್ಣ ರಾವ್

Must read

ಪುತ್ತೂರು: ನಾವು ತಿನ್ನುವ ಆಹಾರದಲ್ಲಿ ಒಂದಲ್ಲ ಒಂದು‌ ವಿಷ ಬೆರೆತಿರುವುದರಿ‌ಂದಲೇ,ಅತೀ ಹೆಚ್ಚು ಜನ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ,
ತಿನ್ನುವ ಆಹಾರದ ಬಗ್ಗೆ ಕಾಳಜಿ ವಹಿಸುವುದೊಂದೇ ಕ್ಯಾನ್ಸರ್ ನಿಯಂತ್ರಣಕ್ಕೆ‌ ಮದ್ದು ಎಂದು ಲೇಖಕ- ಅಂಕಣಕಾರ, ಸಾಮಾಜಿಕ ಹೋರಾಟಗಾರ ಅಡ್ಡೂರು ಕೃಷ್ಣರಾವ್ ಹೇಳಿದರು.


ದರ್ಬೆ ವಿದ್ಯಾನಗರದ ಬಹುವಚನಂ ಆಶ್ರಯದಲ್ಲಿ ಭಾನುವಾರ ನಡೆದ ತಿಂಗಳ ಕಾರ್ಯಕ್ರಮದಲ್ಲಿ “ಆಹಾರದಲ್ಲಿ ವಿಷ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
1945 ರಿಂದ ಭಾರತದಲ್ಲಿ ಆಹಾರಕ್ಕೆ ವಿಷ ಬೀಳತೊಡಗಿದ್ದು,
ಬೆಳೆಯ ರಕ್ಷಣೆಗೆ ತೋಟ, ಗದ್ದೆಗಳಿಗೆ, ಗಿಡಮರಗಳಿಗೆ ಹಾಕಿದ ವಿಷ ಎಲ್ಲೆಡೆ ವ್ಯಾಪಿಸುತ್ತಿದೆ.
ಮಾರಣಾಂತಿಕ ಕಾಯಿಲೆ ಸಿಡುಬು ವಿರುದ್ಧ ಗೆದ್ದಿದ್ದೇವೆ ಎಂದುಕೊಳ್ಳುತ್ತೇವೆ ಆದರೆ, ಅದು ಬೇರೆ ಬೇರೆ ರೂಪದಲ್ಲಿ ಮರುಕಳಿಸುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಅಮೇರಿಕಾದಲ್ಲಿ 1972 ರಲ್ಲಿ ಡಿಡಿಟಿ ಬ್ಯಾನ್ ಆಗಿದೆ, ಆದರೆ ಭಾರತದಲ್ಲಿ ಹೊಸ ಹೊಸ ಡಿಡಿಟಿ ಫ್ಯಾ ಕ್ಟರಿ ಗಳು ತಲೆ ಎತ್ತುತ್ತಿವೆ.
ಡಿಡಿಟಿಗಿಂತ ಹೆಚ್ಚು ವಿಷಕಾರಿ ಕೀಟನಾಶಕವನ್ನು ಕ್ಯಾಬೇಜ್, ಕ್ಯಾಲಿಫ್ಲವರ್ ನಂತಹ ತರಕಾರಿ ಗಳಿಗೆ ಬಳಸಲಾಗುತ್ತಿರುವುದು ದುರಂತ ಎಂದರು.
ಹಸಿರು ಕ್ರಾಂತಿಯ ಹೆಸರಿನಲ್ಲಿ ಪಂಜಾಬ್ ನ ಗದ್ದೆ, ತೋಟಗಳಿಗೆ
ಕೀಟನಾಶಕ ಹೊಡೆದದ್ದೇ ಕ್ಯಾನ್ಸರ್ ರೋಗಿಗಳ ಸೃಷ್ಟಿಗೆ ಕಾರಣವಾಗುತ್ತಿದೆ ಎಂದ ಅವರು, ಅಂಕಿ ಅಂಶವೊಂದರ ಪ್ರಕಾರ ಪಂಜಾಬ್ ನಲ್ಲಿ ದಿನಕ್ಕೆ 18ಮಂದಿ ಕ್ಯಾನ್ಸರ್ ನಿಂದ ಸಾಯುವಂತಾಗಿದೆ.
ಕರಾವಳಿ ಸಹಿತ ನಮ್ಮ ಆಸುಪಾಸಿನಲ್ಲಿ ಎಂಡೋಸಲ್ಫಾನ್ ಸ್ಪ್ರೇ ಯಿಂದ ಆಗಿರುವ ಅನಾಹುತ, ಇಂದಿಗೂ ಅನೇಕ ಜೀವಗಳನ್ನು, ಕುಟುಂಬಗಳ ಜೀವ ಹಿಂಡುತ್ತಿದೆ. ನಾವು ಇದರಿಂದ ಪಾಠ ಕಲಿಯಬೇಕಿತ್ತು, ಆದರೂ ಅಸಹಾಯಕರಂತೆ ಕುಳಿತು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದೇವೆ. ಇದು ದುರದೃಷ್ಟಕರ ಎಂದರು.
ವಿವಿಧ ಅಂಕಿ ಅಂಶಗಳ ಸಹಿತ ಆಹಾರದಲ್ಲಿನ ವಿಷದ ಪ್ರಮಾಣದ ಕುರಿತಾಗಿ ವಿವರಿಸಿದ ಅವರು, ಮನುಷ್ಯ ಸ್ವಯಂ ಜಾಗೃತನಾಗದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ನಮಗೆ ಬೇಕಾದ್ದನ್ನು ನಾವೇ ಬೆಳೆಯುವ ಪರಿಪಾಠ ಬೆಳೆಸಬೇಕು ಮಳೆಯೇ ಸರಿಯಾಗಿ ಬೀಳದ ಇಸ್ರೇಲ್ ನಲ್ಲಿ ಕೃಷಿ ಯಲ್ಲಿ ಕ್ರಾಂತಿ ಮಾಡ್ತಾರಂತೆ, ನಾವು ಫಲವತ್ತಾದ ಮಣ್ಣು ಇಟ್ಕೊಂಡು , ಯಾರೋ ಬೆಳೆದ ವಿಷವನ್ನು ತಿನ್ನುತ್ತಾ, ಮನೆ ಮಕ್ಕಳಿಗೆ ತಿನ್ನಿಸುತ್ತಾ ಬದುಕನ್ನೇ ಹಾಳು ಮಾಡ್ತಾ ಇದ್ದೇವೆ. ಸಾವಯವ ಕೃಷಿಯತ್ತ ಮನಸ್ಸು ಮಾಡೋಣ ಎಂದರು.
ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿಯವರು, ಅಡ್ಡೂರು ಕೃಷ್ಣರಾವ್ ರನ್ನು ಶಾಲುಹೊದಿಸಿ ಸನ್ಮಾನಿಸಿದರು. ಪ್ರಿಯಂವದಾ ಪ್ರಾರ್ಥಿಸಿದರು. ರಂಗಕರ್ಮಿ ಐಕೆ ಬೊಳುವಾರು ಸ್ವಾಗತಿಸಿದರು. ಬಹುವಚನಂ ನ ಡಾ.ಶ್ರೀಶ ಕುಮಾರ್ ಎಂ.ಕೆ. ವಂದಿಸಿದರು.

More articles

Latest article