Tuesday, September 26, 2023

ಬಂಟ್ವಾಳ ತಾಲೂಕಿನ 21 ಗ್ರಾ.ಪಂ.ನಲ್ಲಿ ನೀರಿನ ಸಮಸ್ಯೆ: ಕೆಂಪುಗುಡ್ಡೆಯಲ್ಲಿ ಪ್ರತಿಭಟನೆಗೆ ಸಿದ್ಧತೆ

Must read

ಬಂಟ್ವಾಳ: ತಾಲೂಕಿನ 58 ಗ್ರಾಮ ಪಂಚಾಯತ್ ಗಳ ಪೈಕಿ 21 ಗ್ರಾಮ ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಜಿಲ್ಲಾ ಪಂಚಾಯತ್ ಸಿ.ಇ.ಒ.ಸೆಲ್ವಮಣಿ ತಾಲೂಕು ಪಂಚಾಯತ್ ಇ.ಒ.ಅವರಿಗೆ ಅದೇಶ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನ ಬಾಳೆಪುಣಿ, ಮತ್ತು ನರಿಂಗಾನ ಗ್ರಾಮ ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಉಂಟಾಗಿದ್ದು ಈ ಎರಡು ಗ್ರಾಮದಲ್ಲಿ ಟ್ಯಾಂಕ್ ರ್ ಮೂಲಕ ನೀರು ಸರಬರಾಜು ಮಾಡುವ ಕೆಲಸ ಪಂಚಾಯತ್ ಮಾಡುತ್ತಿದೆ ಎಂದು ಸೆಲ್ವಮಣಿ ತಿಳಿಸಿದ್ದಾರೆ.


ಯಾವ ಯಾವ ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಗಳಿವೆ ಅಂತಹ ಗ್ರಾಮದಲ್ಲಿ ಬೋರುವೆಲ್ ಕೊರೆಯಲು ಜಿ.ಪಂ.ಸಿ.ಇ.ಒ. 25 ಲಕ್ಷ ಅನುದಾನ ಬಿಡುಗಡೆಗೆ ಕ್ರಿಯಾ ಯೋಜನೆ ತಯಾರಿಸಲಾಗಿದ್ದು ಅಗತ್ಯ ಕಡೆಗಳಲ್ಲಿ ಈಗಾಗಲೇ ಬೋರುವೆಲ್ ಕೊರೆಯಲು ಆರಂಭಿಸಲಾಗಿದೆ ಎಂದು ಬಂಟ್ವಾಳ ತಾ.ಪಂ.ಇ.ಒ.ರಾಜಣ್ಷ ತಿಳಿಸಿದ್ದಾರೆ.
ಇನ್ನು ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ಬೇಡಿಕೆ ಬಂದರೆ 14 ನೇ ಹಣಕಾಸು ಯೋಜನೆ ಯಲ್ಲಿ ಬೋರುವೆಲ್ ಕೊರೆಯಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕ್ ರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಇ.ಒ.ತಿಳಿಸಿದ್ದಾರೆ.
ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪುಗುಡ್ಡೆಯಲ್ಲಿ ಕಳೆದ 22 ದಿನಗಳಿಂದ ಕುಡಿಯುವ ನೀರು ಇಲ್ಲದೆ ಇಲ್ಲಿನ ನಿವಾಸಿಗಳು ಕಷ್ಟ ಅನುಭವಿಸುತ್ತಿದ್ದಾರೆ.
ಪಂಚಾಯತ್ ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೇವಲ ಒಂದೇ ಒಂದು ಬಾರಿ ಟ್ಯಾಂಕ್ ರ್ ನೀರು ಕಳುಹಿಸಿ ಕೈ ತೊಳೆದುಕೊಂಡು ಮೌನವಾಗಿ ಕುಳಿತಿದೆ , ಅ ಬಳಿಕ ಎಷ್ಟು ಅಂಗಲಾಚಿದರೂ ನೀರು ಕಳುಹಿಸುವ ಕೆಲಸ ಮಾಡಿಲ್ಲ . ಪಿಡಿಒ ಅವರಿಗೆ ಪೋನ್ ಮಾಡಿದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇಲ್ಲಿನ ನಾಗರಿಕರು ತೀರಾ ಬಡವರಾಗಿದ್ದು ಒಂದು ಹೊತ್ತು‌ಊಟ ಮಾಡುವುದು ಕಷ್ಟದ ಪರಿಸ್ಥಿತಿಯಲ್ಲಿ . ಅಂತಹ ಪರಿಸರದ ನಿವಾಸಿಗಳು ಬೇರೆ ವಿಧಿ ಇಲ್ಲದೆ ಟ್ಯಾಂಕ್ ರ್ ಮೂಲಕ ನೀರು ತರಿಸುತ್ತಿದ್ದಾರೆ.
ಇನ್ನು ಕೇವಲ ಎರಡು ದಿನ ಕಾಯುತ್ತೇವೆ ಅಗಲೂ ಪಂಚಾಯತ್ ನವರು ವ್ಯವಸ್ಥೆ ಮಾಡದಿದ್ದರೆ ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ಹೋಗಿ ಧರಣಿ ಕುಳಿತು ಕೊಳ್ಳುತ್ತೇವೆ ಆಕ್ರೋಶ ವ್ಯಕ್ತಪಡಿಸಿದರು.
ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ಇದೇ ರೀತಿ ಕಾವಳಪಡೂರು ಗ್ರಾಮದ ಕಾಡಬೆಟ್ಟು ಎಂಬಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇಲ್ಲೂ ಪಂಚಾಯತ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಒಟ್ಟು 21 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗೆ ಪರಿಹಾರ ನೀಡಲು ಪಿ.ಡಿ.ಒ.ಗಳು ಕ್ರಮಕೈಗೊಳ್ಳುವಂತೆ ತಾಲೂಕು ಪಂಚಾಯತ್ ಇ.ಒ.ರಾಜಣ್ಣ ತಿಳಿಸಿದ್ದಾರೆ.

1.ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಟಾಡಿ, ಅಜೆಕಲ,
2. ಬಡಗಬೆಳ್ಳೂರು ಗ್ರಾಮ ಪಂಚಾಯತ್ ನ ಮಚ್ಚಿಲ.
3. ಕರೋಪಾಡಿ ಗ್ರಾ.ಪಂ.ನ ಆನೆಕಲ್ಲು, ಶಂಕರಮೂಲೆ, ಗಡಿಜಾಲ, ಮದನಮಾಲಕ.
4. ಕಾವಳಪಡೂರು ಗ್ರಾ.ಪಂ. ನ ಮಧ್ವ, ಕಾಡಬೆಟ್ಟು, .
5. ಕೇಪು ಗ್ರಾ.ಪಂ.ನ ಕುಕ್ಕಬೆಟ್ಟು.
6. ಕೊಳ್ನಾಡು ಗ್ರಾ.ಪಂ.ನ ದೇವಸ್ಯ.
7. ಕುಕ್ಕಿಪಾಡಿ ಗ್ರಾ.ಪಂ.ನ ಸಿದ್ದಕಟ್ಟೆ, ಕುದ್ಕೋಳಿ, ಬದ್ಯಾರು, ಬಂಗ್ಲೆಗುಡ್ಡೆ.
8. ಮೇರೆಮಜಲು ಗ್ರಾ.ಪಂ.ನ ಕುಟ್ಟಿಕಲ, ಮೇರೆಮಜಲು.
9. ನರಿಂಗಾನ ಗ್ರಾ.ಪಂ. ಪೊಟ್ಟೊಳಿಕೆ, ಆಳ್ವರಬೆಟ್ಟು, ಮೊಂಟೆಪದವು.
10. ನಾವೂರ ಗ್ರಾ.ಪಂ.ನ ನಾವೂರು.
11. ಪಜೀರು ಗ್ರಾ.ಪಂ.ನ ಬೇಂಗೋಡಿಪದವು.
12. ಪುಣಚ ಗ್ರಾ.ಪಂ.ನ ಅಜೇರು, ದೇವಿನಗರ, ಕೊಲ್ಲಪದವು, ದಂಡ್ಯತ್ತಡ್ಕ.
13. ರಾಯಿ ಗ್ರಾ.ಪಂ.ನ ಪಡ್ರಾಯಿ, ರಾಯಿ.
14. ಸಜೀಪ ಮೂಡ ಗ್ರಾ.ಪಂ.ಮ ಕೋಮಾಲಿ.
15. ಸಂಗಬೆಟ್ಟು ಗ್ರಾ.ಪಂ.ನ ಮಲ್ದಾಡು, ಗಾಡಿಪಲ್ಕೆ, ಕೆರೆಬಳಿ.
16. ಸರಪಾಡಿ ಗ್ರಾ.ಪಂ.ನ ನ್ಯಾಯದಕಟ್ಟೆ, ಅಲ್ಲಿಪಾದೆ.
17. ವೀರಕಂಭ ಗ್ರಾ.ಪ.ನ ಮಂಗಿಲಪದವು ,ಪಾತ್ರುತೋಟ.
18. ಮಣಿನಾಲ್ಕೂರು ಗ್ರಾ.ಪಂ.ನ ಕೈಯಾಳ.
19. ಅಮ್ಮುಂಜೆ ಗ್ರಾ.ಪಂ.ನ ಬೆಂಜನಪದವು ಶಾಂತಿ ನಗರ.
20. ಅರಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನವಗ್ರಾಮ ಶಂಠಿಹಿತ್ಲು.
21. ಸಾಲೆತ್ತೂರು ಗ್ರಾ.ಪಂ.ವ್ಯಾಪ್ತಿಯ ಬೊಮ್ಮಾರು ಎಂಬಲ್ಲಿ ನೀರಿನ ಸಮಸ್ಯೆ ಗಳು ಉಂಟಾಗಿದ್ದು ಈ ಎಲ್ಲಾ ಕಡೆಗಳಲ್ಲಿ ಯೂ ಬದಲಿ ವ್ಯವಸ್ಥೆ ಗಳು, ಕೆಲವು ಕಡೆಗಳಲ್ಲಿ ಹೊಸ ಬೋರುವೆಲ್ ಕೊರೆಯಲು ಇನ್ನು ಕೆಲವು ಕಡೆಗಳಿಗೆ ಟ್ಯಾಂಕ್ ರ್ ಮೂಲಕ ನೀರು ಒದಗಿಸಲು ಸೂಚಿಸಲಾಗಿದೆ ಎಂದು ಇ.ಒ.ತಿಳಿಸಿದ್ದಾರೆ.

More articles

Latest article