ವಿಟ್ಲ: ಯುವಮನಸ್ಸುಗಳು ಒಂದಾದರೆ ಸಾಮಾಜಿಕ ಅಭಿವೃದ್ಧಿಯ ಕಾರ್ಯ ನಡೆಸಲು ಸಾಧ್ಯ. ಇಲ್ಲಿನ ಯುವಕರ ತಂಡ ಶಿಕ್ಷಣ, ರಕ್ಷಣೆ ಹಾಗೂ ಆರೋಗ್ಯ ಕ್ಷೇತ್ರದ ಸಾಧಕರನ್ನು ತನ್ನ ಕಾರ್ಯಕ್ರಮದಲ್ಲಿ ಗುರುತಿಸುವ ಮೂಲಕ ಮಹತ್ತರ ಕಾರ್ಯ ನಡೆಸಿದೆ ಎಂದು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಹೇಳಿದರು.
ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವದ ಅಂಗವಾಗಿ ನೇರಳಕಟ್ಟೆ ಗಣೇಶ ನಗರದ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ’ವೈಸಿಜಿ ನೈಟ್-2019’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಮೂಲ್ಯ ಮಾತನಾಡಿ, ವೈಸಿಜಿ ತಂಡ ಮಾದರಿಯಾದ ಕಾರ್ಯಕ್ರಮದ ಮೂಲಕ ದೇಶಭಕ್ತಿ ಮೆರೆದಿದೆ ಎಂದು ಶ್ಲಾಘಿಸಿದರು.
ಚಲನಚಿತ್ರ ನಟ ಚಂದ್ರಹಾಸ ರೈ ಕರಿಂಕ, ಕಬಕ ಶಾಲೆಯ ಮುಖ್ಯ ಶಿಕ್ಷಕಿ ಸುಲೋಚನಾ ಡಿ.ರೈ, ಸಹ ಶಿಕ್ಷಕಿ ಕೋಮಲಾಂಗಿ, ಉದ್ಯಮಿ ನಿತಿನ್ ಅರ್ಬಿ, ಅಂಗನವಾಡಿ ಶಿಕ್ಷಕಿ ವಸಂತಿ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಜನಾರ್ದನ ಕುಲಾಲ್, ನಾಟಿವೈದ್ಯ ಸಚ್ಚಿದಾನಂದ ಶೆಟ್ಟಿ, ಪ್ರಗತಿಪರ ಕೃಷಿಕ ಚಂದಪ್ಪ ಮಾಸ್ಟರ್ ಅವರನ್ನು ಅತಿಥಿಗಳು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಿಲಕ್ರಾಜ್ ಶೆಟ್ಟಿಯವರ ವೈದ್ಯಕೀಯ ಚಿಕಿತ್ಸೆಗೆ ಸಂಘದ ವತಿಯಿಂದ ನೆರವಿನ ಮೊತ್ತ ನೀಡಲಾಯಿತು.
ಸಂಘದ ಅಧ್ಯಕ್ಷ ವಿಶುಕುಮಾರ್ ಎನ್, ಗೌರವಾಧ್ಯಕ್ಷ ಜಯಂತ ಆಚಾರ್ಯ, ಗೌರವ ಕಾರ್ಯದರ್ಶಿಗಳಾದ ಶೀತಲ್ ಕೆ.ವಿ., ಮೋಹನ್ ಆಚಾರ್ಯ, ಉಪಾಧ್ಯಕ್ಷ ಪ್ರಶಾಂತ್ ಬಿ., ಕೋಶಾಧಿಕಾರಿ ಸತೀಶ್ ಆಚಾರ್ಯ, ಪದಾಧಿಕಾರಿಗಳಾದ ಲೋಕೇಶ್ ಆಚಾರ್ಯ, ಕಿರಣ್ ಕುಮಾರ್, ಹರೀಶ್, ಸುನಿಲ್, ಶರತ್ ಆಚಾರ್ಯ, ಗೌರೀಶ್, ಗೌರವ ಸಲಹೆಗಾರರಾದ ಡಿ.ಕೆ.ಸ್ವಾಮಿ, ನಾಗರಾಜ ಶೆಟ್ಟಿ ಮಾಣಿ, ಚೇತನ್ ರೈ, ಜಗದೀಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಭೋಜನಾರಾಯಣ ಸ್ವಾಗತಿಸಿದರು. ಕಾರ್ಯದರ್ಶಿ ಉಪೇಂದ್ರ ಆಚಾರ್ಯ ವಂದಿಸಿ, ಶಿಕ್ಷಕ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಶಾರದಾ ಕಲಾಶಾಲೆ ನೇರಳಕಟ್ಟೆ ತಂಡದ ಕಲಾವಿದರಿಂದ ನೃತ್ಯಸಂಭ್ರಮ ಹಾಗೂ ಸಭಾ ಕಾರ್ಯಕ್ರಮದ ಬಳಿಕ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ’ಪಾಂಡುನ ಅಲಕ್ಕ ಪೋಂಡು’ ತುಳು ಹಾಸ್ಯ ನಾಟಕ ನಡೆಯಿತು.
