ನೆನಪ ಬೇರಿನಾಳದಲೂ
ಬಿಳಲುಗಳ ಹೊಸ ಚಿಗುರು
ಹರಿವ ನೀರ ಚೂಪಿನಲೂ
ಒಡಲ ಕಿಚ್ಚಿನ ಧಗೆಯುರಿಯು
ಬಿಸುಪ ಸುಳಿಗಾಳಿಯಂಚಲೂ
ಇಂಚಿಂಚು ಹನಿವ ಮುಗಿಲು
ಬಿಸಿಲ ನೇತ್ರನ ರಸಾತಳದಲೂ
ನಣ್ಣಗೆ ಸುಂಯ್ಗುಡುವ ತಣ್ಣೆಳಲು
ಎಲ್ಲೆಂದರಲ್ಲಿ ಭೋರ್ಗರೆದು ಧುಮ್ಭಿಕ್ಕಿ
ಒಡಲುರಿಯ ಕಡಲ ದನಿಯಾಗುವ ವಾಂಛೆ
ಕೌಮುದಿಯ ಕಾಂತಿಯಲಿ ಕರಿಮೇಘಗಳ
ರಣಕೇಕೆಗೆ ಕಿತ್ತ ಹರಿದ ಭಾವ ಭಿತ್ತಿ
ಎಲ್ಲೆಂದರಲ್ಲಿ ಬುಸುಗುಡುವ ಕಾಳಿಂಗ
ಮರ್ದನದ ಗೋರಿಯಲೂ ಬಾಡಿದ ಹೂವು
ಹೀಗೆ ನರ ನಾಡಿಗಳಲೆಲ್ಲ ನಿತ್ಯ ನರಕದ
ಕೀವುದುಂಬಿದ ಗುಳ್ಳೆಗಳ ನಿಲ್ಲದ ಬಸಿರು
ಬೆಕ್ಕಸ ಬೆರಗಾದ ಬಯಲಲೂ
ಇಳೆಯ ಆರ್ತನಾದದ ಅಳಲು
ಹೇ ದೇವ, ನಿನ್ನುಪಟಳಕೆ ಬೆದರಿ
ಬೆಂಗಾಡಾದ ಎದೆಯಲಿ ನಿಲ್ಲದ ಏದುಸಿರು
#ನೀ.ಶ್ರೀಶೈಲ ಹುಲ್ಲೂರು