ವಿಟ್ಲ: ದೇವರ ಮಕ್ಕಳಾದ ನಾವೆಲ್ಲರೂ ಪರಸ್ಪರ ಪ್ರೀತಿಯಿಂದ ಅನ್ಯೋನ್ಯವಾಗಿ ಬಾಳುವುದೇ ಜೀವನದ ಬಹುಮುಖ್ಯ ವಿಚಾರವಾಗಿದೆ. ಯುವ ಜನರು ಒಳ್ಳೆಯ ಕಾರ್ಯಗಳೊಂದಿಗೆ ಮುನ್ನಡೆದಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಮೊಗರ್ನಾಡು ವಲಯ ಐಸಿವೈಎಂ ನಿರ್ದೇಶಕರಾದ ಧರ್ಮಗುರು ಹೆನ್ರಿ ಡಿಸೋಜ ಹೇಳಿದರು.
ಅವರು ಕ್ರೈಸ್ಟ್ ದ ಕಿಂಗ್ ಚರ್ಚೆ ಮನೆಲ, ಭಾರತೀಯ ಕೆಥೋಲಿಕ್ ಯುವ ಸಂಚಾಲನ ಇದರ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಭಾನ್ವಿತರ ಮೂಲಕ ಒಂದು ಸಣ್ಣ ಊರು ಸಹ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಗುರುತಿಸಲ್ಪಡುತ್ತದೆ ಎಂದು ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಕ್ರೈಸ್ತ ಬಂಧುಗಳ ಮೂಲಕ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ದೇಶಕ್ಕೆ ಅಪಾರ ಕೊಡುಗೆ ಸಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮನೆಲಾ ಚರ್ಚ್ ನ ಧರ್ಮಗುರು ಪ್ರಕಾಶ್ ಪಾವ್ಲ್ ಡಿಸೋಜ ಮಾತನಾಡಿ ಕೆಥೋಲಿಕ್ ಯುವ ಸಂಚಾಲನದ ಮೂಲಕ ಈಗಾಗಲೇ ನಾನಾ ಸಾಮಾಜಿಕ ಕಾರ್ಯಗಳು ನಡೆದಿವೆ. ಮುಂದೆ ಬಡ ಕುಟುಂಬಕ್ಕೆ ಗೃಹ ನಿರ್ಮಾಣ, ಶಾಲಾ ಆಟದ ಮೈದಾನ ವಿಸ್ತರಣೆ, ಸಾರ್ವಜನಿಕ ಶೌಚಾಲಯಕ್ಕೆ ಇಂಟರ್ಲಾಕ್ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ವಿದ್ಯಾಜ್ಯೋತಿ ವಿದ್ಯಾಲಯದ ಸಿಸ್ಟರ್ ಸಿಂಥಿಯಾ, ಪರಿಯಾಲ್ತಡ್ಕ ಶಾಲಾ ಮುಖ್ಯ ಶಿಕ್ಷಕ ಹರ್ಷಶಾಸ್ತ್ರಿ ಮಣಿಲ, ಪಾಲನಾ ಸಮಿತಿ ಉಪಾಧ್ಯಕ್ಷ ಎಂಬ್ರೋಸ್ ಮೊಂತೇರೋ ಭಾಗವಹಿಸಿದ್ದರು.
ಐಸಿವೈಎಂ ಸಚೇತಕಿ ಶೈಲಾ ಪ್ರಾಸ್ರಾವಿಕವಾಗಿ ಮಾತನಾಡಿದರು. ಐಸಿವೈಎಂ ಅಧ್ಯಕ್ಷ ಸ್ಯಾಮ್ಸನ್ ಕುಟಿನ್ಹೋ ಸ್ವಾಗತಿಸಿದರು. ಕಾರ್ಯದರ್ಶಿ ನಿಶ್ಮಿತಾ ವಂದಿಸಿದರು. ಅನಿತಾ ಮೊಂತೇರೋ ಕಾರ್ಯಕ್ರಮ ನಿರೂಪಿಸಿದರು. ವಿನೀತಾ, ಮೆಲ್ವಿಟಾ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ ಯಲ್ಲಿ ಸಾಧನೆ ಮಾಡಿದ ಕಾವ್ಯಶ್ರೀ, ಅರ್ಮನ್ ಹಾಗೂ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅನನ್ಯ, ಧನುಸ್, ಚರಣ್ ಹಾಗೂ ತರಬೇತುದಾರರಾದ ಧರ್ಣಪ್ಪ ಖಂಡಿಗ ಮತ್ತು ದಿನೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಬಳಿಕ ಮಂಗಳೂರು ಚಾ ಪರ್ಕ ಕಲಾವಿದರಿಂದ ‘ಪನಿಯೆರೆ ಆವಂದಿನ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.