ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ರೈತ ಸಮ್ಮಾನ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಪಹಣಿ (ಆರ್ ಟಿಸಿ )ಯ ಅಗತ್ಯವಿದ್ದು, ಕಳೆದ ಎರಡು ದಿನಗಳಿಂದ ರೈತರು ಪಹಣಿಪತ್ರಕ್ಕಾಗಿ ಬಂಟ್ವಾಳ ಮಿನಿವಿಧಾನ ಸೌಧದಲ್ಲಿರುವ ಅಟಲ್ ನೆಮ್ಮದಿ ಕೇಂದ್ರದಲ್ಲಿ ಸರತಿಯ ಸಾಲಿ ದೃಶ್ಯ ಕಂಡುಬಂದಿದ್ದು, ಈ ಸನ್ನಿವೇಶ ಸೃಷ್ಟಿಯಾಗಿರುವ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು, ಗುರುವಾರ ಮಿನಿವಿಧಾನಸೌಧಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದೆಡೆ ಆಧಾರ್ ನೋಂದಣಿ, ಮತ್ತೊಂದೆಡೆ ವಿವಿಧ ಅರ್ಜಿಗಳ ಸಲ್ಲಿಕೆಗೆ ಜನರ ಸಂದಣಿ ಇದರ ಮಧ್ಯೆ ರೈತ ಸಮಾನ ಯೋಜನೆಯ ಸವಲತ್ತು ಪಡೆಯಲು ಪಹಣಿಪತ್ರ ಕ್ಕಾಗಿ ರೈತರು ಸಾಲುಗಟ್ಟಿ ನಿಲ್ಲುವುದರಿಂದ ಗೊಂದಲ ಉಂಟಾಗಿತ್ತು.



ಈ ನಡುವೆ ಕಳೆದೆರಡು ದಿನಗಳಿಂದ ಆಗಾಗ ವಿದ್ಯುತ್ ಮತ್ತು ಸರ್ವರ್ ಕೂಡ ಕೈ ಕೊಡುತ್ತಿರುವುದರಿಂದ ಆರ್ ಟಿಸಿ ಪಡೆಯಲು ಸಾಧ್ಯವಾಗದೆ ರೈತರು,ಸಾರ್ವಜನಿಕರು ಹಿಡಿಶಾಪ ಹಾಕಿ ವಾಪಾಸಾಗುತ್ತಿದ್ದರು. ಈ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಮಿನಿವಿಧಾನ ಸೌಧ ಕ್ಕೆ ತೆರಳಿ ನೆಮ್ಮದಿ ಕೇಂದ್ರದಲ್ಲಾಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸಿದರು. ರಾಜ್ಯಮಟ್ಟದಲ್ಲಿಯೇ ಉಂಟಾಗುವ ಸರ್ವರ್ ಸಮಸ್ಯೆಯ ಕುರಿತು ಮಾಹಿತಿ ಪಡೆದ ಶಾಸಕರು ನೇರವಾಗಿ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಅವರನ್ನು ಸಂಪರ್ಕಿಸಿ ಸಾರ್ವಜನಿಕರು,ರೈತರಿಗೆ ಪಹಣಿ ಪಡೆಯಲು ಅಗುತ್ತಿರುವ ಸಮಸ್ಯೆಯನ್ನು ಗಮನಸೆಳೆದು ಪರ್ಯಾಯ ವ್ಯವಸ್ಥೆಗೆ ಸೂಚಿಸಿದರು. ಈ ಸಂದರ್ಭದಲ್ಲಿ ನೆಮ್ಮದಿಕೇಂದ್ರಲ್ಲಿ ಆರ್ ಟಿ ಸಿ ಮತ್ತಿತರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಶಾಸಕರಲ್ಲಿ ದೂರಿಕೊಂಡರು, ತಹಶೀಲ್ದಾರ್ ಸಣ್ಣ ರಂಗಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಶಾಸಕರು ಸೂಕ್ತ ಕ್ರಮಕ್ಕೆ ಸೂಚಿಸಿದರು.
ಆರ್ ಟಿ ಸಿ ಅಗತ್ಯವಿಲ್ಲ: ಶಾಸಕರ ಸೂಚನೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಪ್ರಧಾನಮಂತ್ರಿ ಸಮ್ಮಾನ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳು ಆರ್ ಟಿಸಿಯನ್ನು ಲಗತ್ತೀಕರಿಸುವ ಅವಶ್ಯವಿಲ್ಲ,ತಮ್ಮ ಅರ್ಜಿಯಲ್ಲಿ ಡಿಕ್ಲರೇಶನ್ ಪತ್ರಕ್ಕೆ ರೈತ ಸಹಿ ಹಾಕಿ ಸಲ್ಲಿಸಿದರೆ, ಇದನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಪತ್ರಿಕೆಗಳಿಗೆ ತಿಳಿಸಿದ್ದಾರೆ.ಹಾಗೆಯೇ ಜಿಲ್ಲಾಧಿಕಾರಿಯವರು ನೀಡಿರುವ ಮಾಹೊತಿಯನ್ಮು ಕೃಷಿಅಧಿಕಾರಿಗಳಿಗೂ ತಿಳಿಸಲಾಗಿದ್ದು,ಅವರು ಕೂಡ ಇದಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿರುವ ಶಾಸಕರು ಫಲಾನುಭವಿಗಳು ಆರ್ ಟಿಸಿಗಾಗಿ ನೆಮ್ಮದಿ ಕೇಂದ್ರದಲ್ಲಿ ಸಾಲುಗಟ್ಟಿ ನಿಲ್ಲಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಶಾಸಕರ ಭೇಟಿಯ ವೇಳೆ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಮೋನಪ್ಪದೇವಸ್ಯ, ಪುರುಷೋತ್ತಮ ಶೆಟ್ಟಿ ವಾಮದಪದವು, ರಾಜಾರಾಮ ನಾಯಕ್, ಗುರುದತ್ತ ನಾಯಕ್ ಬಂಟ್ವಾಳ, ಮಹೇಶ್ ಶೆಟ್ಟಿ ಮೊದಲಾದವರಿದ್ದರು.