Saturday, October 28, 2023

’ಯುವಕರು ತುಳು ಭಾಷೆ, ಸಾಹಿತ್ಯದ ಬಗ್ಗೆ ಪ್ರೀತಿ, ಅಭಿಮಾನವಿಟ್ಟಾಗ ಹಿಂದಿನ ವೈಭವ ಕಾಣಬಹುದು’-ಒಡಿಯೂರು ಶ್ರೀ

Must read

ವಿಟ್ಲ: ತುಳು ಪ್ರತಿಯೊಬ್ಬರ ಮನಸ್ಸನ್ನು ಸೆಳೆಯತಕ್ಕ ಹೃದಯಸ್ಪರ್ಶಿ ಭಾಷೆಯೆನಿಸಿದೆ. ತುಳುವರು ಒಟ್ಟಾದಾಗ ಮಾತ್ರ ತುಳುವರ ಶಕ್ತಿಯ ವಿಶ್ವರೂಪ ದರ್ಶನವಾಗಲು ಸಾಧ್ಯ. ಯುವಕರು ತುಳು ಭಾಷೆ, ಸಾಹಿತ್ಯದ ಬಗ್ಗೆ ಅದಮ್ಯ ಪ್ರೀತಿ, ಅಭಿಮಾನವಿಟ್ಟಾಗ ತುಳುನಾಡಿನ ಹಿಂದಿನ ಕಾಲದ ವೈಭವ ಮತ್ತೆ ಮರುಕಳಿಸಬಹುದು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಶುಕ್ರವಾರ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಫೆ. 14 ಮತ್ತು 15 ರಂದು ನಡೆಯಲಿರುವ ತುಳು ಸಾಹಿತ್ಯ ಸಮ್ಮೇಳನ ಮತ್ತು ತುಳುನಾಡ್ದ ಜಾತ್ರೆ- ಒಡಿಯೂರು ರಥೋತ್ಸವ ಕಾರ್‍ಯಕ್ರಮದ ರೂಪುರೇಷೆಯ ಬಗ್ಗೆ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು. ಯಾವುದೇ ಒಳ್ಳೆಯ ಕಾರ್‍ಯಗಳಿಗೆ ವಿಘ್ನಗಳಿರುವುದು ಸಹಜ.
ಫೆ. 14 ರಂದು ಸಂಶೋಧಕಿ, ಸಾಹಿತಿ ಡಾ. ಇಂದಿರಾ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಡೆಯುವ ’ತುಳು ಬದ್ಕ್‌ದ ನಿಲೆ-ಬಿಲೆ ವಿಚಾರದ ಅಡಿಯಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದಲ್ಲಿ ಪುರಾತನ ತುಳು, ನಡುಗಾಲದ ತುಳು, ಆಧುನಿಕ ತುಳು ಭಾಷೆ ಬೆಳೆದು ಬಂದ ಬಗ್ಗೆ ವಿಮರ್ಶೆ ನಡೆಯಲಿದೆ. ಇದೇ ಸಂದರ್ಭದಲ್ಲಿ ತುಳು ಭಾಷಾಭಿಮಾನಿಗಳಿಗೆ ಪೂರಕವಾಗಿ ’ಅದೃಷ್ಟ ತುಳುವೆ ಬಂಗಾರ್ ಪೆಜುವೆ’ ಎಂಬ ಕಾರ್‍ಯಕ್ರಮ ವಿಶೇಷವಾಗಿ ನಡೆಯಲಿದೆ. ಫೆ.15 ರಂದು ಎರಡು ಗ್ರಾಮಗಳನ್ನು ಸಂಧಿಸುವ ವಿಶಿಷ್ಟ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ತುಳು ಸಮ್ಮೇಳನದ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಮಾತನಾಡಿ ತುಳು 8 ನೇ ಪರಿಚ್ಛೇದಕ್ಕೆ ಸೇರಲಿರುವ ಭಾಷೆಗಳಲ್ಲಿ ಮೊದಲನಯದಗಿ ಇರುವುದು ನಮ್ಮೇಲ್ಲರ ಭಾಗ್ಯವಾಗಿದೆ. ತುಳು ಕಾರ್‍ಯಕ್ರಮ ಹೆಚ್ಚೆಚ್ಚು ನಡೆಯಬೇಕು ಎಂದು ತಿಳಿಸಿ, ಸಮ್ಮೇಳನದಲ್ಲಿ ನಡೆಯುವ ನಾನಾ ಗೋಷ್ಠಿಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಒಡಿಯೂರು ತುಳು ಕೂಟದ ಸ್ಥಾಪಕ ಅಧ್ಯಕ್ಷ ಮಲಾರ್ ಜಯರಾಮ ರೈ, ಸ್ವಾಗತ ಸಮಿತಿಯ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ, ಹೊರೆ ಕಾಣಿಕೆ ಸಮಿತಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಅನಂತಾಡಿ ಮಾತನಾಡಿದರು. ಆರ್ಥಿಕ ಸಮಿತಿ ಸಂಚಾಲಕ ಎ. ಸುರೇಶ್ ರೈ, ಶ್ರೀಗುರುದೇವ ವಿದ್ಯಾ ಸಂಸ್ಥೆಗಳ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀವಜ್ರಮಾತಾ ಮಹಿಳಾ ಸೇವಾ ಸಮಿತಿ ಅಧ್ಯಕ್ಷ ಸರ್ವಾಣಿ ಪಿ. ಶೆಟ್ಟಿ, ಶ್ರೀ ಸಂಸ್ಥಾನದ ಕಾರ್‍ಯನಿರ್ವಾಹಕ ಪದ್ಮನಾಭ ಒಡಿಯೂರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿ ಸಂಚಾಲಕ ಅಜಿತ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸ್ವಯಂ ಸೇವಕ ಸಮಿತಿ ಸಂಚಾಲಕ ಸದಾಶಿವ ಅಳಿಕೆ ವಂದಿಸಿದರು. ಯಶವಂತ ವಿಟ್ಲ ಕಾರ್‍ಯಕ್ರಮ ನಿರೂಪಿಸಿದರು.

More articles

Latest article