ಬಂಟ್ವಾಳ, ಜ. ೨೪: ಕರ್ನಾಟಕ ರಾಜ್ಯ ವಸತಿ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜ. ೨೭ರಂದು ಶೈಕ್ಷಣಿಕ ಸಂವಾದ ಕಾರ್ಯಕ್ರಮ ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಭಾಂಗಣದಲ್ಲಿ ನಡೆಯಲಿದೆ ಎಂದು ರಾಜ್ಯ ವಸತಿ ಶಾಲಾ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಮತ್ತು ಚಾಣಕ್ಯ ಕರಿಯರ್ ಅಕಾಡಮಿ ಬಿಜಾಪುರ ಇದರ ನಿರ್ದೇಶಕ ಎನ್.ಎಂ.ಬಿರಾದಾರ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಅಮುಕ್ತ್(ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಸಂಘ)ನ ಅಧ್ಯಕ್ಷ ಡಾ.ಜೋಸೆಫ್ ಎನ್.ಎಂ. ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ದ.ಕ.ಜಿಲ್ಲೆಯ ಉಪನಿರ್ದೇಶಕ ಯೋಗೀಶ್ ಎಸ್.ಬಿ,
ಹಿಂದುಳಿದ ವರ್ಗಗಳ ಇಲಾಖೆ ದ.ಕ. ಜಿಲ್ಲಾ ಅಧಿಕಾರಿ ಮುಹಮ್ಮದ್ ಸಿಯಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎನ್. ಶಿವಪ್ರಕಾಶ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ವಸತಿ ಶಾಲೆಗಳ ಆಯ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಏರ್ಪಡಿಸಿರುವ ಈ ಸಂವಾದದಲ್ಲಿ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ. ಶ್ರೀ ಸಂತೋಷ್ ಹೆಗ್ಡೆಯವರು ಜೀವನ ಮೌಲ್ಯಗಳ ಕುರಿತಾಗಿ, ಎನ್.ಎಂ.ಬಿರಾದಾರ ಅವರು ವೃತ್ತಿ ಮಾರ್ಗದರ್ಶನದ ನೆಲೆಯಲ್ಲಿ ಸಂವಾದವನ್ನು ನಡೆಸಲಿರುವರು. ವಿದ್ಯಾರ್ಥಿಗಳು ಸಾರ್ವಜನಿಕ ಬದುಕಿಗೆ ಹೋಗುವವರಾಗಿರುವುದರಿಂದ ಅವರಿಗೆ ಮಾರ್ಗದರ್ಶನ ಮಾಡುವ ಶಿಕ್ಷಕರಿಗೆ ಸಾರ್ವಜನಿಕ ಜೀವನದ ಸಾಕಷ್ಟು ಅನುಭವಗಳು ಬೇಕಾಗುತ್ತವೆ. ಅಂತಹ ಅನುಭವಗಳನ್ನು ಪಡೆಯುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೧೧ ಮೊರಾರ್ಜಿ ಶಾಲೆಗಳಿದ್ದು, ೭೮ ಶಿಕ್ಷಕರು ಹಾಗೂ ೪ ಸಾವಿರ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಪೂಜಾರಿ, ಸುಬ್ರಹ್ಮಣ್ಯ ನಾಯ್ಕ್, ಕೃಷ್ಣ ಪ್ರಸಾದ್, ಗಣೇಶ್ ನಾಯಕ್, ಪ್ರವೀಣ್ ಪೂಜಾರಿ ಪಣಪ್ಪಿಲ, ಅರವಿಂದ ಚೊಕ್ಕಾಡಿ, ವಾಣಿ ಉಪಸ್ಥಿತರಿದ್ದರು.
