ಬಂಟ್ವಾಳ: ಪಾಣೆಮಂಗಳುರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ 70ನೇ ಸಂವಿಧಾನ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮ ಶನಿವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಚಿಂತಕ ದಮ್ಮಾನಂದ ಬೆಳ್ತಂಗಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವವು ಸಂವಿಧಾನದ ಅಂಗವಾಗಿದೆ. ಅದನ್ನು ಉಳಿಸುವ ಕಾರ್ಯವಾಗಬೇಕಾಗಿದೆ. ದೇಶದ ಏಕತೆ, ಸಾರ್ವಭೌಮ, ಅಖಂಡತೆ ಉಳಿಯಬೇಕಾದರೆ ಸಂವಿಧಾನ ರಕ್ಷಣೆ ಅಗತ್ಯ. ಕೇವಲ ಸಂವಿಧಾನ ದಿನಾಚರಣೆಯನ್ನು ಆಚರಿಸಿದರೆ ಸಾಲದು. ಬದಲಾಗಿ ಸಂವಿಧಾನವನ್ನು ಓದಿ, ಅರ್ಥೈಸುವ ಮೂಲಕ ಅದರ ಆದರ್ಶಗಳನ್ನು ಮೈಗೂಡಿಸಿಕೊಂಡು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ದೇವರಿಗೆ ಮನುಷ್ಯರೆಲ್ಲರೂ ಸಮಾನರು ಎಂದು ಹೇಳುತ್ತಿರುವ ನಾವುಗಳು, ಮನುಷ್ಯ ಮನುಷ್ಯರ ನಡುವಿನ ಅಸಮಾನತೆಯನ್ನು ಉಂಟು ಮಾಡುತ್ತಿದ್ದೇವೆ ಎಂದು ವಿಷಾದಿಸಿದ ಅವರು, ಸಮಾನತೆ, ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ಭ್ರಾತೃತ್ವದ ಬಗ್ಗೆ ಮಾಹಿತಿ ನೀಡಿದರು.
ಪಾಣೆಮಂಗಳುರು ಶ್ರೀ ಶಾರದಾ ಪ್ರೌಢ ಶಾಲೆಯ ಸಂಚಾಲಕ ಎಂ.ಜನಾರ್ದನ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಶೀಕ್ಷಕ ಭೋಜ ಕೆ., ಹಿರಿಯ ಶಿಕ್ಷಕರಾದ ಶಿವಪ್ಪನಾಯ್ಕ, ಉಮಾ ಕಿಶೋರಿ, ಶಾಲಾ ನಾಯಕ ಹರ್ಷಿತ್ ಉಪಸ್ಥಿತರಿದ್ದರು. ಶಿಕ್ಷಕ ಧನರಾಜ್ ಡಿ.ಆರ್ ಸ್ವಾಗತಿಸಿದರು. ಶಿಕ್ಷಕ ಶಿವಪ್ಪನಾಯ್ಕ್ ವಂದಿಸಿ, ಶಿಕ್ಷಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಅತಿಥಿಗಳಾದ ದಮ್ಮಾನಂದ ಬೆಳ್ತಂಗಡಿ ಅವರು ಮಕ್ಕಳಿಗೆ ಸಂವಿಧಾನ ರಕ್ಷಣಾ ಪ್ರತಿಜ್ಞಾವಿಧಿ ಬೋಧಿಸಿದರು.