Sunday, October 22, 2023

ಅಡ್ಯನಡ್ಕ: ’ಆರಾಧನೆ’ ಕವನ ಸಂಕಲನ ಬಿಡುಗಡೆ

Must read

ಅಡ್ಯನಡ್ಕ: ಅಡ್ಯನಡ್ಕ ಎಜುಕೇಷನಲ್ ಸೊಸೈಟಿ ಪ್ರಕಟಿಸಿರುವ ಜನತಾ ಪ್ರೌಢಶಾಲೆಯ ವಿದ್ಯಾರ್ಥಿನಿ ಪಂಚಮಿ ಕುಮಾರಿ ಬಾಕಿಲಪದವು ಬರೆದಿರುವ ’ಆರಾಧನೆ’ ಕವನ ಸಂಕಲನದ ಬಿಡುಗಡೆ ಕಾರ್‍ಯಕ್ರಮ ಜ.೨೬ ರಂದು ವಿದ್ಯಾಸಂಸ್ಥೆಯ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ, ಪತ್ರಕರ್ತ ಶಂಕರ್ ಸಾರಡ್ಕ ಕೃತಿ ಬಿಡುಗಡೆ ನೆರವೇರಿಸಿ ಮಾತನಾಡಿ, ಕವಿತೆಯ ಮೂಲಕ ಜರಗುವ ಅಭಿವ್ಯಕ್ತಿ ಭಾವನೆಗಳನ್ನು ಪ್ರಕಟಗೊಳಿಸುತ್ತದೆ. ಎಳವೆಯಲ್ಲಿ ಪುಸ್ತಕ ಓದುವ ಅಭಿರುಚಿ ಮಕ್ಕಳಿಗೆ ಬರವಣಿಗೆಯ ಶೈಲಿ, ವೈಖರಿಯನ್ನು ಕಲಿಸುತ್ತದೆ. ವಿಶಿಷ್ಟವಾಗಿ ಗುರುತಿಸಿಕೊಳ್ಳುವ ಬಯಕೆ ಸಾಧನೆಗಳಿಗೆ ಕಾರಣವಾಗುತ್ತದೆ ಎಂದು ನುಡಿದರು.
ಕೃತಿಯ ಪ್ರಕಾಶಕರಾದ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ವಾರಣಾಶಿ, ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು, ಸಾಹಿತಿ ಮತ್ತು ಸಂಘಟಕ ಭಾಸ್ಕರ ಅಡ್ವಳ, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಶ್ರೀನಿವಾಸ್, ಲೇಖಕಿ ಪಂಚಮಿಕುಮಾರಿ ಮಾತನಾಡಿದರು. ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದರು. ಪೋಷಕರಾದ ವೆಂಕಟ್ರಮಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ಸ್ವಾಗತಿಸಿ, ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ವಂದಿಸಿದರು. ಕನ್ನಡ ಅಧ್ಯಾಪಕ ಶಿವಕುಮಾರ ಸಾಯ ಕಾರ್‍ಯಕ್ರಮ ನಿರೂಪಿಸಿದರು.

More articles

Latest article