ಬಂಟ್ವಾಳ, ಜ. ೬: ರಸ್ತೆದಾಟುವಾಗ ಬೈಕ್ ವೊಂದು ಢಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ.ಸಿ.ರೋಡ್ ನಾರಾಯಣ ಗುರು ಸರ್ಕಲ್ ಸಮೀಪ ರವಿವಾರ ಸಂಭವಿಸಿದೆ.
ಮಂಗಳೂರು ಪಡೀಲ್ ಸಮೀಪದ ವೀರ ನಗರ ನಿವಾಸಿಗಳಾದ ಚಂದ್ರಕಲಾ (30) ಅವರಿಗೆ ಗಾಯವಾಗಿದ್ದು, ಮಗ ಗಗನ್ (10) ಅವರಿಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಯಿ ಮಗ ಇಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಪಡೀಲ್ ನಿಂದ ಪಣೋಲಿಬೈಲು ದೇವಸ್ಥಾನಕ್ಕೆ ತೆರಳಿದ್ದರು ಎನ್ನಲಾಗಿದೆ. ಬಳಿಕ ಅಲ್ಲಿಂದ ಬಿ.ಸಿ.ರೋಡ್ ಗೆ ಬಂದಿದ್ದು, ಇಲ್ಲಿನ ರಸ್ತೆ ಬದಿಯ ಅಂಗಡಿಗೆಂದು ರಸ್ತೆ ದಾಟುವಾಗ ಬೈಕ್ ವೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಗಗನ್ ಎಂಬವರ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
ಬಂಟ್ವಾಳ ಟ್ರಾಫಿಕ್ ಎಸ್ಸೈ ಮಂಜುಳಾ ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.


