Saturday, February 8, 2025

ಬರಿಮಾರು ಸಂತ ಜೋಸೆಫ್ ಚರ್ಚ್ ಆಶ್ರಯದಲ್ಲಿ ಸೌಹಾರ್ದ ಕ್ರಿಸ್ಮಸ್-2018

ಬಂಟ್ವಾಳ: ಏಸು ಸ್ವಾಮಿಯ ಸಂದೇಶಗಳು ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಾಗಿಲ್ಲ, ಅದನ್ನು ಎಲ್ಲಾ ಸಮುದಾಯಕ್ಕೆ ತಲುಪಿಸುವ ಜವಬ್ದಾರಿ ಕ್ರೈಸ್ತ ಸಮುದಾಯದವರ ಮೇಲಿದೆ ಎಂದು ಪುತ್ತೂರಿನ
ಸಿರೋ ಮಲಂಕರ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಹೇಳಿದರು.


ಬೊರಿಮಾರು ಸಂತ ಜೋಸೆಫರ ದೇವಾಲಯದ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಾಣಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಸೌಹಾರ್ದ ಕ್ರಿಸ್ಮಸ್ -2018 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರತಿಯೊಂದು ಧರ್ಮವೂ ಅದರದ್ದೇ ಆದ ಆಚಾರ ವಿಚಾರವನ್ನು ಹೊಂದಿದ್ದು, ಇತರ ಧರ್ಮವನ್ನು ಗೌರವಿಸುವುದೇ ನಿಜವಾದ ಧರ್ಮ ಎಂದರು.
ಶಾಂತಿಯ ದಾಹ ಎಲ್ಲೆಡೆ ಕಾಣಿಸುತ್ತಿದ್ದು, ಇಂತಹಾ ಸಂದರ್ಭದಲ್ಲಿ ಮಹಾತ್ಮಾಗಾಂಧಿಯ ಅಹಿಂಸಾ ಮಾರ್ಗ ನಮಗೆ ಮಾರ್ಗದರ್ಶನವಾಗಲಿ , ಪರಸ್ಪರ ಸೌಹಾರ್ದದ ಜೊತೆಗೆ ಸಮಾಜದಲ್ಲಿ ಸದಾ ಸಾಮರಸ್ಯ ನೆಲೆಯಾಗಲಿ ಎಂದರು. ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಮಠದ ಡಾ.ಶಶಿಕಾಂತ ಮಣಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತ ಇಡೀ ವಿಶ್ವಕ್ಕೆ ಒಳ್ಳೆಯ ಸಂದೇಶ ನೀಡುತ್ತಿದೆ.
ಮನಸ್ಸಿನೊಳಗಿನ ಒಳಿತು ಮತ್ತು ಕೆಡುಕಿನ ವಿಚಾರಗಳು ಜೀವನವನ್ನು ನಿರ್ಧರಿಸುತ್ತದೆ ಎಂದ ಅವರು, ಮಾತೆಯರು ಮೌನ ಮುರಿಯಬೇಕು, ಜೊತೆಗೆ ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಕಾರ್ಯ ಎಲ್ಲಾ ಧರ್ಮಗಳಲ್ಲಿಯೂ ಮಾತೆಯರಿಂದ ನಡೆಯಬೇಕು ಎಂದರು. ಭಾರತ ಮಾತೆಯ ನಡುವೆ ಜಾತಿ ಧರ್ಮದ ಗೆರೆಯನ್ನು ,ಕಲಹದ ಬರೆಯನ್ನೂ ಎಳೆದು ದ್ರೋಹ ಬಗೆಯುತ್ತಿದ್ದೇವೆ, ಇದು ಸರಿಯಲ್ಲ ಎಂದರು.

ಮುಲ್ಕಿ ಕೇಂದ್ರ ಶಫಿ ಜುಮ್ಮಾ ಮಸೀದಿಯ ಖತೀಬರಾದ ಎಸ್.ಬಿ.ಮಹಮ್ಮದ್ ದಾರಿಮಿ ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿ, ಈ ವೇದಿಕೆಯಲ್ಲಿ ಮೂರುಮಂದಿ ಧರ್ಮಗುರುಗಳು ಒಟ್ಟಾಗಿರುವುದೇ ನಿಜವಾದ ಸೌಹಾರ್ದದ ಸಂದೇಶ ಎಂದರು. ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡವರಿಂದ, ರಾಜಕೀಯ ಹಿತಾಸಕ್ತಿ ಉಳ್ಳವರಿಂದ ಸಮಾಜದಲ್ಲಿ ಕೆಟ್ಟ ಘಟನೆಗಳು ನಡೆಯುತ್ತಿದೆ ಎಂದರು. ದೊಡ್ಡ ದೊಡ್ಡ ದೇವಸ್ಥಾನ, ಮಸೀದಿಗಳನ್ನು ಕಟ್ಟುವುದಕ್ಕಿಂತ ಇಂತಹಾ ಸೌಹಾರ್ದದ ಕಾರ್ಯಕ್ರಮಗಳು ನಿಜವಾದ ಮಾನವರನ್ನು ನಿರ್ಮಾಣ ಮಾಡುತ್ತದೆ ಎಂದರು.

ಬೊರಿಮಾರ್ ಸಂತ ಜೋಸೆಫರ ದೇವಾಲಯದ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ , ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಸಿಕ್ವೇರಾ , ಅಸ್ಸಾಂ ನ ಧರ್ಮಗುರು ಫೆಲಿಕ್ಸ್ ಪಿಂಟೋ ವೇದಿಕೆಯಲ್ಲಿದ್ದರು.
ಇದೇ ಸಂದರ್ಭ ಚಾಪರ್ಕ ನಾಟಕ ತಂಡದ ಮುಖ್ಯಸ್ಥ ದೇವದಾಸ್ ಕಾಪಿಕಾಡ್ ಹಾಗೂ ಕಾರ್ಯಕ್ರಮದ ಪೋಷಕರಾದ ಬೆನೆಡಿಕ್ಟ್ ಪಿಂಟೋ ರವರ ಪರವಾಗಿ,ಅವರ ತಾಯಿ ಶ್ರೀಮತಿ ಮೆರ್ಸಿನ್ ಪಿಂಟೋ ರವರನ್ನು ಸನ್ಮಾನಿಸಲಾಯಿತು.
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಬೊನಿಫಾಸ್ ಮಾರ್ಟಿಸ್ ಸ್ವಾಗತಿಸಿದರು. ಬಿ.ರಾಮಚಂದ್ರ ರಾವ್ ವಂದಿಸಿದರು. ಕ್ಯಾಂಡಲ್ ಉರಿಸಿ, ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಣೆ ಮಾಡಲಾಯಿತು.

More from the blog

ಅನರ್ಹ ಮತದಾರರ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಗೆ ಪರಿಗಣಿಸಬಾರದು: ಉಚ್ಚ ನ್ಯಾಯಾಲಯದ ತೀರ್ಪು

ಬಂಟ್ವಾಳ: ಮಡಂತ್ಯಾ‌ರ್ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವ ವ್ಯಕ್ತಿಗಳ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ಉಚ್ಚ ನ್ಯಾಯಲಯವು ಐತಿಹಾಸಿಕ ತೀರ್ಪನ್ನು ಹೊರಡಿಸಿದೆ. ಮಡಂತ್ಯಾ‌ರ್ ಪ್ರಾಥಮಿಕ...

ಬಂಟ್ವಾಳ : ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೀಡಿ – ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ

ಬಂಟ್ವಾಳ: ಸುಸಜ್ಜಿತವಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವಿಭಾಗದಲ್ಲಿ ವೈದ್ಯರುಗಳಿಲ್ಲದೆ, ತಾಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಸಾಮಾಜಿಕ ಕಾರ್ಯಕರ್ತ ಸಮಾದ್ ಕೈಕಂಬ ಅವರು...

ಕಣಿಯೂರು: ನುಡಿನಮನ, ಯಕ್ಷಗಾನ ತಾಳಮದ್ದಳೆ

ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಉಪನ್ಯಾಸಕ ಪಕಳಕುಂಜ ಶ್ಯಾಮ್ ಭಟ್, ಕೂಡ್ಲು ಗಣಪತಿ ಭಟ್ ಅವರಿಗೆ ನುಡಿ ನಮನ ಹಾಗೂ ಯಕ್ಷಗಾನ ತಾಳಮದ್ದಳೆ...

ಒಡಿಯೂರಿನಲ್ಲಿ 25ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಒಡಿಯೂರು ರಥೋತ್ಸವ ತುಳುನಾಡ ಜಾತ್ರೆಯ ಅಂಗವಾಗಿ 25 ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ...