ಬಂಟ್ವಾಳ: ಕೊರೊನಾ ನಿಯಂತ್ರಣ ಕಾರ್ಯಕ್ಕೆ ಸಂಬಂಧಿಸಿದಂತೆ ಕಡೇಶ್ವಾಲ್ಯ ಗ್ರಾ.ಪಂ. ಹಾಗೂ ಬರಿಮಾರು ಗ್ರಾ.ಪಂ. ನ ಟಾಸ್ಕ್ ಫೋರ್ಸ್ ಸಭೆಯು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಆವರಣದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಶಾಸಕರು ಮಾತನಾಡಿ, ಸದ್ಯಕ್ಕೆ ಕಡೇಶಿವಾಲಯ ಪಂಚಾಯತ್ ವ್ಯಾಪ್ತಿಯಲ್ಲಿ 5 ಹಾಗೂ ಬರಿಮಾರು ಗ್ರಾ.ಪಂ. ವ್ಯಾಪ್ತಿಯಲ್ಲಿ 1 ಪ್ರಕರಣಗಳಿದ್ದು, ಅದು ಎಚ್ಚಾಗದಂತೆ ಎಚ್ಚರ ವಹಿಸಬೇಕಿದೆ. ಜೊತೆಗೆ ಪಾಸಿಟಿವ್ ಬಂದವರಿಗೆ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದೇ ಇದ್ದರೆ ಕೇರ್ ಸೆಂಟರ್ಗಳನ್ನೂ ತೆರೆಯುವ ಕೆಲಸ ಮಾಡಲಾಗುತ್ತಿದೆ ಎಂದರು.
ಗ್ರಾಮಕ್ಕೆ ಹೊರ ಜಿಲ್ಲೆ, ರಾಜ್ಯದವರು ಬಂದರೆ ಎಚ್ಚರಿಕೆ ವಹಿಸಬೇಕು. ವಾರಕ್ಕೆ ಒಂದು ಬಾರಿ ಟಾಸ್ಕ್ ಫೋರ್ಸ್ ಸಭೆ ನಡೆಸಬೇಕು. ಕೋವಿಡ್ ನಿಯಮ ಪಾಲನೆ ಮಾಡದೆ ಉಲ್ಲಂಘನೆ ಮಾಡುವವರ ಮೇಲೆ ಕ್ರಮಕೈಗೊಳ್ಳಲು ಟಾಸ್ಕ್ ಫೋರ್ಸ್ ಸಮಿತಿ ಗೆ ಸಂಪೂರ್ಣ ಅವಕಾಶವಿದ್ದು ಎಲ್ಲರೂ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳಲು ಅವರು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ಅಯಾಯ ಗ್ರಾಮದ ಜನತೆ ಸಹಕಾರ ನೀಡುವಂತೆ ಸಭೆಯಲ್ಲಿ ಶಾಸಕರು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಪಡಿತರ ಆಗಮಿಸಲಿದ್ದು ಅಂಗಡಿಯಲ್ಲಿ ಯಾವುದೇ ರೀತಿಯ ಗುಂಪು ಸೇರದಂತೆ ವಿತರಣೆಗೆ ವ್ಯವಸ್ಥೆ ಮಾಡಬೇಕು. ಮನೆ ಮನೆ ಭೇಟಿಯ ಸಂದರ್ಭದಲ್ಲಿ ಯಾವುದೇ ತೊಂದರೆ ಎದುರಾದರೂ ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆ ಆಶಾ ಕಾರ್ಯಕರ್ತರಿಗೆ ತಿಳಿಸಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿಗಾರ್, ಉಪಾಧ್ಯಕ್ಷೆ ಜಯ ಆರ್, ಬರಿಮಾರು ಗ್ರಾಮ ಪಂಚಾಯತ್ ಅದ್ಯಕ್ಷೆ ಶಶಿಕಲಾ , ಉಪಾಧ್ಯಕ್ಷ ಸದಾಶಿವ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ ಪ್ರಸನ್ನ, ನಿರೀಕ್ಷಕ ರಾಮ ಕಾಟಿಪಳ್ಳ, ಕಡೇಶಿವಾಲಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ಬಿ,ಬರಿಮಾರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲಕ್ಷಣ್ ಎಚ್.ಕೆ. ಕಾರ್ಯದರ್ಶಿ ವೀರಪ್ಪ ಗೌಡ, ಕಾರ್ಯದರ್ಶಿ ಹೊನ್ನಪ್ಪ ಕೆ, ಗ್ರಾಮ ಕರಣಿಕೆ ಶಿಲ್ಪಾ, ಬರಿಮಾರು ಗ್ರಾ.ಪಂ. ಸಿಬ್ಬಂದಿಗಳಾದ ಯಶೋಧರ, ಗುರುಪ್ರಸಾದ್, ಶಾರೀಕ, ವೀಣಾ , ಗ್ರಾ.ಪಂ. ಸದಸ್ಯರು, ಟಾಸ್ಕ್ ಪೊರ್ಸ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.