Wednesday, October 18, 2023

ತುಳುವಿನ ಉಳಿವು ನಮ್ಮಿಂದಲೇ ಆಗಬೇಕು: ಒಡಿಯೂರು ಶ್ರೀ

Must read

ವಿಟ್ಲ:  ಇಂದಿನ ಸಮಾಜದಲ್ಲಿ ಬದುಕು ಶಿಕ್ಷಣದ ಕೊರತೆಯಿದೆ. ಪ್ರಜ್ಞಾವಂತ ಪ್ರಜೆಗಳ ಸಿದ್ದತೆಗಾಗಿ ಪೂರಕ ಶಿಕ್ಷಣ ಅಗತ್ಯ. ದೇವರು ತಂದಿರುವ ವಿಘ್ನಗಳನ್ನು  ದೇವರೇ ಪರಿಹರಿಸಬೇಕು. ತಾಯಿಯಂದಿರ ಸಂಸ್ಕಾರ ಶಿಕ್ಷಣವೇ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಬಹುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಒಡಿಯೂರು ಶ್ರೀ ಗುರುದೇವದತ್ತ ‌ಸಂಸ್ಥಾನದಲ್ಲಿ  ಫೆ.21 ಹಾಗೂ ಫೆ.22ರಂದು ನಡೆಯಲಿರುವ ತುಳುನಾಡ ಜಾತ್ರೆ, ಶ್ರೀ ಒಡಿಯೂರು‌ ರಥೋತ್ಸವ ಪ್ರಯುಕ್ತ ಪ್ರಥಮ ದಿನವಾದ ಫೆ.21ರಂದು ನಡೆದ  ತುಳುನಾಡ ಜಾತ್ರೆ  ‘ಇರುವತ್ತೊಂಜನೇ ಐಸಿರೊ’ ತುಳು ಸಾಹಿತ್ಯ ಸಮ್ಮೇಳನ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ತುಳುವಿನ ಉಳಿವು ನಮ್ಮಿಂದಲೇ ಆಗಬೇಕು. ಆಂಗ್ಲ ವ್ಯಾಮೋಹ ಬಿಟ್ಟು ತುಳುವಿನ ಬಗೆಗಿನ ಒಲವು ಮೂಡಬೇಕು. ನಮ್ಮ ಹಿರಿಯರನ್ನು ಗೌರವಿಸುವ ಕೆಲಸ ನಮ್ಮಿಂದಲೇ ಆಗಬೇಕು. ಒಗ್ಗಟ್ಟಿನಿಂದ ಬದುಕುವ ಮನಸ್ಸು ನಮ್ಮದಾಗಬೇಕು. ಜನರಿಗೆ ಜಾಗೃತಿ  ಮೂಡಿಸುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನ ಅತೀ ಅಗತ್ಯವಾಗಿದೆ ಎಂದರು.

ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ಭಾಷೆ, ಸಂಸ್ಕೃತಿ ಭಾವನೆಯನ್ನು ಅರಳಿಸುತ್ತದೆ. ತುಳುನಾಡಿನ ಸಂಸ್ಕೃತಿ ಶ್ರೇಷ್ಠವಾದುದು. ನಾವೆಲ್ಲರೂ ತುಳು ಬಾಷೆಯ ಉಳಿವಿಗಾಗಿ ಸಹಕಾರ ಅಗತ್ಯ ಎಂದರು.

ಹಿರಿಯ ಸಾಹಿತಿ ಮಲಾರು ಶ್ರೀ ಜಯರಾಮ ರೈರವರು ಕಾರ್ಯಕ್ರಮದ ಅಧ್ಯಕ್ಷತೆ‌ ವಹಿಸಿ ಮಾತನಾಡಿ ಬಾಷೆ ಎಂಬುದು ಆತ್ಮದ ಸ್ವರ. ಅದು ಮುಂದೊಂದು ದಿನ ಲಿಪಿಯಾಗಿ ಬದಲಾಯಿತು.  ಸಾಹಿತ್ಯಕ್ಕೆ ಲಿಪಿ ಮೂಲ. ಬಾಷೆ ಎಂದರೆ ಅದು ಅನರ್ಘ್ಯ ಸಂಪತ್ತು.

ವಿಚಾರ ಯಾವುದೇ ಇದ್ದರು ಮನುಷ್ಯರು ಸತ್ಯ ತಿಳಿಯಬೇಕು. ತುಳು ಎಂಬುದು ಪ್ರೀತಿ ಭಾವದ ಭಾಷೆ. ತುಳು ಭಾಷೆಯ ಆಳ ಇನ್ನೂ ಇದೆ. ಅದನ್ನು ಅಳೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.

ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಸಂಚಾಲಕರು, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಪುತ್ತೂರು ವಲಯ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ರವರು ಮಾತನಾಡಿ ಒಡಿಯೂರು ಸ್ವಾಮೀಜಿಯವರು ಹಲವಾರು ವರುಷಗಳಿಂದ ನಿರಂತರವಾಗಿ ತುಳುವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಧರ್ಮಸ್ಥಳ ದ ಹೆಗ್ಗಡೆ ಹಾಗೂ ಒಡಿಯೂರು ಶ್ರೀಗಳು ತುಳುವಿನ ಉಳಿವಿಗಾಗಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ತುಳುವಿನ ಉಳಿವಿಗಾಗಿ ನಾವೆಲ್ಲರೂ ಒಮ್ಮತದಿಂದ ಸಹಕರಿಸಬೇಕಾಗಿದೆ. ಸ್ವಾಮೀಜಿಯವರ ಷಷ್ಠ್ಯಬ್ದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಮಾಡಬೇಕೆಂಬ ನಮ್ಮೆಲ್ಲರ ಹಂಬಲ ನಮಗೆಲ್ಲಾ ಇದೆ. ಪುತ್ತೂರಿನಲ್ಲಿ ಇದೀಗಾಗಲೇ ಸಮಿತಿ ರಚನೆಯಾಗಿದ್ದು ಹಲವಾರು ಕಾರ್ಯಕ್ರಮವನ್ನು ನಡೆಸುವ ಇರಾದೆ ನಮಗಿದೆ. ಈ ಎಲ್ಲಾ ಕಾರ್ಯಕ್ರಮ ಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷರಾದ  ಡಾ.ತುಕಾರಾಮ ಪೂಜಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ. ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರೋ| ವಿ.ಬಿ. ಅರ್ತಿಕಜೆಯವರು ಅನುವಾದ ಮಾಡಿದ ಹನುಮಾನ್ ಚಾಲಿಸ್ ತುಳು ಪುಸ್ತಕ, ಡಾ.ವಸಂತಕುಮಾರ್ ಪೆರ್ಲ ಇವರು ಬರೆದ ‘ಮದಿಪುದ ಪಾತೆರೊಲು’ ತುಳು ಪುಸ್ತಕ ಹಾಗೂ ಮಲಾರು ಜಯರಾಮ ರೈರವರು ಬರೆದ

ಕಬೀರೆರೆ ಕಮ್ಮೆನ ತುಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಲಾರು ಶ್ರೀ ಜಯರಾಮ ರೈ ಹಾಗೂ ಅವರ ಪತ್ನಿ ಗೀತಾ ಜಯರಾಮ ರೈರವರುನ್ನು ಸ್ವಾಮೀಜಿಯವರು ಸನ್ಮಾನಿಸಿದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಇದರ ಅಧ್ಯಕ್ಷರಾದ ಕೃಷ್ಣ ಎಲ್.ಶೆಟ್ಟಿ ದಂಪತಿಗಳು ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು. ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಮುಂಬೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷರಾದ ಅಶೋಕ್ ಕುಮಾರ್ ಬಿಜೈ, ಮೋಹನ್ ಹೆಗ್ಡೆ ಥಾನೆರವರು ಅತಿಥಿಗಳನ್ನು ಗೌರವಿಸಿದರು.

ಒಡಿಯೂರು ತುಳುಕೂಟದ ಅಧ್ಯಕ್ಷರಾದ ಯಶವಂತ ವಿಟ್ಲ ಅಧ್ಯಕ್ಷರ ಸನ್ಮಾನ ಪತ್ರ ವಾಚಿಸಿದರು.

ರೇಣುಕಾ ಎಸ್.ರೈ ಒಡಿಯೂರುರವರು ಪ್ರಾರ್ಥಿಸಿದರು.

ತುಳು ಸಾಹಿತ್ಯ ಸಮ್ಮೇಳನ ಕೂಟದ ಅಧ್ಯಕ್ಷರಾದ ಡಾ.  ವಸಂತ ಕುಮಾರ್ ಪೆರ್ಲರವರು ಸ್ವಾಗತಿಸಿದರು. ದೇವಿಪ್ರಸಾದ್ ರೈ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ಐಟಿಐ ಕನ್ಯಾನ ಇದರ ಪ್ರಾಚಾರ್ಯರಾದ ಕರುಣಾಕರ ಎನ್.ಬಿ. ವಂದಿಸಿದರು.

More articles

Latest article