


ಉಜಿರೆ: ಸರಕಾರಗಳು ಬಹಳ ವರ್ಷಗಳಿಂದಲೂ ಕುಡಿಯುವ ನೀರಿನ ಪೂರೈಕೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡು ಬರುತ್ತಿದೆ. ಇಷ್ಟಾಗ್ಯೂ ಈಗಲೂ ಎಷ್ಟೋ ಜನರಿಗೆ ಶುದ್ಧ ಕುಡಿಯವ ನೀರು ಲಭಿಸುತ್ತಿಲ್ಲ . ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ನೂಚ್ಚ ಹೇಳಿದರು.
ಅವರಿಂದು ದ.ಕ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ಮತ್ತು ಜೆಜೆಎಮ್ ಅನುಷ್ಠಾನ ಬೆಂಬಲ ಸಂಸ್ಥೆಯಾದ ಸಮುದಾಯದ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು . ವಿವಿಧ ಪ್ರದೇಶಗಳಿಗೆ ಹೋಲಿಸಿದಲ್ಲಿ ಕರಾವಳಿ ಭಾಗದ ನಾವುಗಳು ಜಲಸಂಪನ್ಮೂಲವನ್ನು ಹೆಚ್ಚಾಗಿ ಹೊಂದಿದ್ದೇವೆ ಮುಂದಿನ ತಲೆಮಾರಿಗೂ ಅಂತರ್ಜಲವನ್ನು ಉಳಿಸುವ ಕಾರ್ಯ ನಮ್ಮಿಂದ ಆಗಬೇಕಿದೆ. ಯಾರು ಕೂಡ ಶುದ್ದ ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂಬುದು ಜಲಜೀವನ್ ಮಿಷನ್ನಿನ ಮುಖ್ಯ ದ್ಯೇಯೋದ್ದೇಶವಾಗಿದೆ. ಈ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಪಾತ್ರ ಬಹುಮುಖ್ಯ ಎಂದವರು ಅಭಿಪ್ರಾಯಪಟ್ಟರು. ನೀರು ಪರೀಕ್ಷಾ ವಿಧಾನದ ಕುರಿತು ಆದಿತ್ಯ ಅವರು ಮಾಹಿತಿ ನೀಡಿದರು. ಬಳಿಕ ಜೆಜೆಎಮ್ ಜಿಲ್ಲಾ ಐಇಸಿ/ಹೆಚ್.ಆರ್ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಜಲಜೀವನ್ ಮಿಷನ್ ಇದರ ಉದ್ದೇಶ ಮತ್ತು ಅಗತ್ಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಜೆಜೆಎಮ್ ಐಇಸಿ ಮಹಾಂತೇಶ್ ಹಿರೇಮಠ್ ಮತ್ತು ಹೆಚ್.ಆರ್.ಡಿ ಫಲಾಹರೇಶ್ ಮಣ್ಣೂರಮಠ ಅವರು ತಮ್ಮ ತಮ್ಮ ಚಟುವಟಿಕೆಗಳನ್ನು ಹಂಚಿಕೊಂಡರು. ಸಮುದಾಯ ಸಂಸ್ಥೆಯ ಇಂಜಿನಿಯರ್ ಅಶ್ವಿನ್ ಗ್ರಾಮ ಕ್ರಿಯಾ ಯೋಜನೆಯ ಬಗ್ಗೆ ಪಂಚಾಯತಿಗಳು ಒದಗಿಸಬೇಕಾದ ವಿವರಗಳ ಬಗ್ಗೆ ತಿಳಿಸಿದರು. ಸಹಾಯಕ ಇಂಜಿನಿಯರ್ ಹರ್ಷಿತ್ ಅವರು ತಮ್ಮ ಕಾರ್ಯ ವ್ಯಾಪ್ತಿಯ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಸುತ್ತಲಿನ 12 ಗ್ರಾಮ ಪಂಚಾಯತು ವ್ಯಾಪ್ತಿಯ ಒಟ್ಟು 60 ಜನರು ಮತ್ತು ಕೆಲವು ಪಿಡಿಒ ಗಳು,ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ಆಯೋಜನೆಯ ಸಹಾಯಕ ರಘುಚಂದ್ರ ಮತ್ತಿತರರು ಭಾಗವಹಿಸಿದ್ದರು.





