ಬಂಟ್ವಾಳ: ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಬಿ.ವಿ.ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ ಮಾ. 19ರಿಂದ 21ರ ವರೆಗೆ ಮಂಚಿ ನೂಜಿಬೈಲು ಅನುದಾನಿತ ಹಿ.ಪ್ರಾ. ಶಾಲೆಯ ವಠಾರದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ರಾಮಚಂದ್ರ ಭಟ್ ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.19ರಂದು ಸಂಜೆ 6:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ವಿಟ್ಲ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ಅನಂತಕೃಷ್ಣ ಹೆಬ್ಬಾರ್ ಉದ್ಘಾಟಿಸಲಿದ್ದು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಬಂಟ್ವಾಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಮೋಹನ್ ರಾವ್, ಮಂಚಿ ನೂಜಿಬೈಲ್ ಅನುದಾನಿತ ಹಿ.ಪ್ರಾ. ಶಾಲೆಯ ಸಂಚಾಲಕ ಶಾಂತಲಾ ಎನ್. ಭಟ್ ನೂಜಿಬೈಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ 7 ಗಂಟೆಗೆ ಕೆ.ವಿ.ಸುಬ್ಬಣ್ಣ ರಚನೆಯ, ಬಿ.ಆರ್.ವೆಂಕಟರಮಣ ಐತಾಳರ ನಿರ್ದೇಶನದಲ್ಲಿ ಶಿವಮೊಗ್ಗ ರಂಗಾಯಣ ಅಭಿನಯಿಸುವ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.
ಮಾ.20ರಂದು ಸಂಜೆ 7 ಗಂಟೆಗೆ ಗಣೇಶ ಮಂದಾರ್ತಿ ಹಾಗೂ ಶ್ರವಣ್ ಹೆಗ್ಗೋಡು ನಿರ್ದೇಶನದಲ್ಲಿ ನಾ. ಡಿ.ಸೋಜರವರ ಕಾದಂಬರಿ ಆಧಾರಿತ, ಎಸ್.ಮಾಲತಿಯವರ ರಂಗರೂಪಕ ಆಧಾರಿತ, ಶಿವಮೊಗ್ಗ ರಂಗಾಯಣ ಅಭಿನಯಿಸುವ ‘ಹಕ್ಕೀ ಕತೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮಾ.21ರಂದು ಸಂಜೆ 6:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜೆಕಳ ಗಿರೀಶ್ ಭಟ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ, ನ್ಯಾಯವಾದಿ ಶಶಿರಾಜ ಕಾವೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಾಯಕ ನಿರ್ದೇಶಕ ರಾಜೇಶ್ ಜಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 7 ಗಂಟೆಗೆ ಕಿನ್ನರ ಮೇಳ, ತುಮುರಿ ಅಭಿನಯಿಸುವ ಯಶವಂತ ಚಿತ್ತಾಲರ ‘ಅಬೋಲಿನ್’ ಕಥೆ ಆಧಾರಿತ, ಕೆ.ಜಿ.ಕೃಷ್ಣ ಮೂರ್ತಿ ಅವರು ರಂಗ ರೂಪಾಂತರಗೊಳಿಸಿ ನಿರ್ದೇಶಿಸಿರುವ ‘ಅಬ್ಬಲಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಚಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಜೊತೆ ಕಾರ್ಯದರ್ಶಿ ಎನ್.ರಮಾನಂದ, ಸದಸ್ಯ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.