


ವಿಟ್ಲ: ಮಾತು, ಮನಸ್ಸು ಸರಿಯಾಗಿದ್ದಾಗ ಬದುಕು ಹಸನಾಗುತ್ತದೆ. ಬದುಕು ಒಂದು ಕಲೆಯಾಗಬೇಕು. ಬದುಕು ಕಟ್ಟುವ ಕೆಲಸ ಅಷ್ಟೊಂದು ಸುಲಭವಲ್ಲ. ಭಾರತ ದೇಶದ ಮೌಲ್ಯ ಅಧ್ಯಾತ್ಮದಲ್ಲಿ ಅಡಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿ.23ರಿಂದ ಡಿ.29ರ ವರೆಗೆ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ನಾನಾ ಧಾರ್ಮಿಕ ಕಾರ್ಯಕ್ರಮ ಹಾಗೂ ಶ್ರೀಗಳ ಷಷ್ಠ್ಯಬ್ದ ಸಂಭ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಯಾವುದೇ ಕಾರ್ಯ ಮಾಡುವಾಗ ಅದು ಸಮಾಜದ ಒಳಿತಿಗಾಗಿ ಮಾಡಬೇಕು. ಕೊರೋನಾತಂಕದಿಂದ ಸಮಾಜದಲ್ಲಿ ಭಯದ ವಾತಾವರಣವಿದೆ. ಭಗವಂತ ನೀಡಿದ ಶರೀರವನ್ನು ಸರಿಯಾಗಿ ಸದ್ಬಳಕೆ ಮಾಡಿ ಬದುಕಬೇಕು ಎಂದರು.
ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಕೇಂದ್ರ ಸಮಿತಿ ಕಾಂರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿಯವರು ಮಾತನಾಡಿ ಒಡಿಯೂರು ಸಂಸ್ಥಾನದಿಂದ ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯನ್ನೂ ಮೇಲೆ ತರುವ ನಿಟ್ಟಿನಲ್ಲಿಯೂ ಕೆಲಸ ಕಾರ್ಯಗಳು ನಡೆಯುತ್ತಿದೆ. ಒಡಿಯೂರು ಶ್ರೀಗಳು. ಕೃಷಿ, ತುಳು ಭಾಷೆಯ ಉಳಿವಿಗಾಗಿ ಬೇಕಾಗುವ ಎಲ್ಲಾ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಶ್ರೀ ಸಂಸ್ಥಾನದ ಸಾಧ್ವೀ ಮಾತಾನಂದ ಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಷಷ್ಠ್ಯಬ್ದ ಕಾರ್ಯಕ್ರಮದ ಲಾಂಛನ, ಸಂಸ್ಥಾನದ ಮುಖವಾಣಿ ದತ್ತಪ್ರಕಾಶನ, ಸಂಸ್ಥಾನದ ಕ್ಯಾಲೆಂಡರ್, ಹಾಗೂ 20-21 ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಆರಂಭ ನಡೆಯಿತು. ದತ್ತಮಾಲಾಧಾರಣೆ ನಡೆಯಿತು.
ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ವಾಮಯ್ಯ ಬಿ ಶೆಟ್ಟಿ ಚೆಂಬೂರು ಮುಂಬೈ, ರೇವತಿ ವಾಮಯ್ಯ ಶೆಟ್ಟಿ, ಕೃಷ್ಣ ಎಲ್. ಶೆಟ್ಟಿ ಮುಂಬೈ, ಅಶೋಕ್ ಕುಮಾರ್ ಬಿಜೈ, ಅಜಿತ್ ಕುಮಾರ್ ಪಂದಲಂ ತಿರುವನಂತಪುರ, ಮಂಗಳೂರು ವಲಯದ ಪ್ರಧಾನ ಕಾರ್ಯದರ್ಶಿ ತಾರಾನಾಥ ಶೆಟ್ಟಿ ಬೋಳಾರ್, ಖಜಾಂಜಿ ಸುರೇಶ್ ರೈ, ಮಂಗಳೂರು ವಲಯ ಸಂಚಾಲಕ ನಾಗರಾಜ ಆಚಾರ್ಯ, ಪುತ್ತೂರು ವಲಯ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ನಗ್ರಿಗುತ್ತು ರೋಹಿತ್ ಶೆಟ್ಟಿ, ಲಿಂಗಪ್ಪ ಗೌಡ, ಸರ್ವಾಣಿ ಪಿ. ಶೆಟ್ಟಿ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಮಲಾರ್ ಜಯರಾಮ ರೈ ಉಪಸ್ಥಿತರಿದ್ದರು.
ನವನೀತ ಶೆಟ್ಟಿ ಕದ್ರಿ ಸ್ವಾಗತಿಸಿದರು. ಜಯಪ್ರಕಾಶ್ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.





