ಬಂಟ್ವಾಳ: ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಕೆಲಸ ಮಾಡುವುದು ನಿಜವಾದ ಸಾಧನೆ, ಇಂತವರ ಸಾಲಿನಲ್ಲಿ ನಿವೃತ್ತಿ ಹೊಂದಿದ ವಿಶ್ವನಾಥ ರೈ ಇರುವುದು ಸಂತೋಷದ ವಿಚಾರ ಎಂದು ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಹೇಳಿದರು.
ಅವರು ಕಳೆದ 27 ವರ್ಷಗಳಿಂದ ಜಿಲ್ಲೆಯ ವಿವಿಧ ಪೋಲೀಸ್ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರಸ್ತುತ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಎ.ಎಸ್.ಐ. ಅಗಿದ್ದ ವಿಶ್ವನಾಥ ರೈ ಮತ್ತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಿಂದ ಎಸ್.ಐ. ಅಗಿ ಪದೋನ್ನತಿ ಹೊಂದಿ ನಗರ ಠಾಣೆಗೆ ವರ್ಗಾವಣೆಗೊಂಡಿರುವ ಕಲೈಮಾರ್ ಹಾಗೂ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಿಂದ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿರುವ ಹೆಡ್ ಕಾನ್ಸ್ಟೇಬಲ್ ವರ್ಗೀಸ್ ಅವರ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವನಾಥ ರೈ ಅವರು ಇಲಾಖೆಯ ಯಾವುದೇ ಕೆಲಸ ನೀಡಿದರೂ ನಿಷ್ಠೆಯಿಂದ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಕೆಲಸ ಮಾಡುವಾಗ ಪ್ರಮಾಣಿಕತೆಯಿಂದ ನಿಷ್ಠೆಯಿಂದ ಮಾಡಿ ಎಂದು ಅವರು ಹೇಳಿದರು.
ಬೀಳ್ಕೊಡುಗೆ ಕಾರ್ಯಕ್ರಮದ ಸಂಘಟಕ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಅವರು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಕೆಲಸ ಮಾಡಿ, ಇಲಾಖೆಯ ಪ್ರತಿಯೊಂದು ಕೆಲಸಗಳನ್ನು ಪ್ರೀತಿಯಿಂದ ಜೊತೆಯಾಗಿ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ. ಅವಿನಾಶ್ ಹಾಗೂ ವಿಟ್ಲ ಎಸ್.ಐ. ವಿನೋದ್ ರೆಡ್ಡಿ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೋ. ಎಸ್.ಐ. ನಸ್ರೀನಾತಾಜ್, ಹಿರಿಯವರ ಅನುಭವ ಕಿರಿಯರಿಗೆ ಸದಾ ಸ್ಪೂರ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ. ಸಂಜೀವ ಹಾಗೂ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಿಬ್ಬಂದಿ ವಿವೇಕ್ ಕಾರ್ಯಕ್ರಮ ನಿರೂಪಿಸಿದರು.