ಬಂಟ್ವಾಳ: ಪ್ರಸ್ತುತ ದಿನಗಳಲ್ಲಿ ಭಾರೀ ಸುದ್ದಿಯಾಗಿ ಯುವಜನತೆಯ ಭವಿಷ್ಯದ ಮೇಲೆ ವಿಪರೀತ ಪರಿಣಾಮ ಬೀರಿದ ಮಾದಕ ವಸ್ತುವಾದ ಡ್ರಗ್ಸ್ ನ ಬಗ್ಗೆ ಸರಿಯಾದ ಕಾನೂನು ರೂಪಿಸಬೇಕು. ಅದರ ಜೊತೆಗೆ ಎನ್.ಡಿ.ಎಸ್. ಆಕ್ಟ್, ನಾರ್ಫೋಟಿಕ್ ಕಂಟ್ರೋಲ್ ಕಾಯಿದೆ, ಕೋಟ್ಪಾ ಕಾಯಿದೆ, ಸೆಂಟ್ರಲ್ ಅಬಕಾರಿ ಕಾಯಿದೆ, 1988 ಆಕ್ಟ್ ಮುಂತಾದ ಕಾಯಿದೆಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಜೊತೆಗೆ ಮಾದಕವಸ್ತುಗಳ ಹಿಂದೆ ಇರುವ ಎಲ್ಲಾ ವ್ಯಕ್ತಿಗಳಿಗೆ ಕಠಿನ ಶಿಕ್ಷೆಯಾಗಬೇಕು ಎಂದು ಸರಕಾರವನ್ನು ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್ ಒತ್ತಾಯಿಸಿದರು.
ಅವರು ಬಂಟ್ವಾಳದ ಉನ್ನತಿ ಸೌಧದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದರು. ಯುವಜನತೆ ದಾರಿ ತಪ್ಪಿದರೆ ದೇಶದ ಅಭಿವೃದ್ಧಿ ಅಸಾಧ್ಯ. ಕೃಷಿಯ ಅವಶ್ಯಕತೆ ಭಾರತ ದೇಶಕ್ಕೆ ಎಷ್ಟು ಪ್ರಾಮುಖ್ಯವೋ, ಅಷ್ಟೇ ಯುವಜನತೆಯ ಪ್ರಾಮುಖ್ಯತೆ ಇದೆ.
ಯುವಜನತೆ ಡ್ರಗ್ಸ್ ನಂತಹ ಮಾದಕವಸ್ತುಗಳ ಮೋಹಕ್ಕೆ ಬಲಿಯಾಗುತ್ತಿರುವುದು ವಿಷಾಧನೀಯ ಎಂದು ಹೇಳಿದರು.
ಹೆಣ್ಮಕ್ಕಳು ಮಾದಕ ವಸ್ತುಗಳ ಕಿಂಗ್ ಪಿನ್ ಗಳಾಗಿ ಗೋಚರಿಸುತ್ತಿರುವುದು ಬಹಳ ಬೇಸರ ತಂದಿದೆ. ಭಾರತದಲ್ಲಿ ಪೂರಕವಾದ ಕಾನೂನುಗಳು ಇಲ್ಲವೇ ಎಂಬ ಪ್ರಶ್ನೆಗಳು ಉದ್ಭವಿಸುವ ಕಾಲ ಬೇಸರ ತಂದಿದೆ ಎಂದರು. 22 ಬಗೆಯ ಮಾತ್ರೆಗಳನ್ನು ಪ್ರಾಥಮಿಕ ಶಾಲೆಯಿಂದ ಡಿಗ್ರಿವರೆಗೆ ನೀಡುವ ಕೆಲಸ ಬೆಳಕಿಗೆ ಬಂದಿದೆ. ಜನಪ್ರತಿನಿಧಿಗಳು ಇಂತಹ ಸಮಾಜ ಬಾಹಿರ ಚಟುವಟಿಕೆಗಳನ್ನು ನಿಷೇಧ ಮಾಡುವಲ್ಲಿ ಮಹತ್ತರ ಜವಾಬ್ದಾರಿ ವಹಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿ ಎಂದು ಹೇಳಿದರು.
ಸರಕಾರ ವಾರ್ತಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮೂಲಕ ಸಮಾಜ ಬಾಹಿರ ಚಟುವಟಿಕೆಗಳನ್ನು ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ. ಜನಜಾಗೃತಿ ಯೋಜನೆ ವಿಪತ್ತು ನಿರ್ವಹಣಯ ತಂಡದ ಮೂಲಕ ಕೋವಿಡ್ ಸಂದರ್ಭದಲ್ಲಿ ಅನೇಕ ಜನಪರವಾದ ಯೋಜನೆ ನೀಡಿದೆ ಎಂದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ರಾಮಚಂದ್ರ ಎನ್., ಮಾಜಿ ಶಾಸಕ ರುಕ್ಮಯ ಪೂಜಾರಿ, ಕಾಸರಗೋಡು ಜಿಲ್ಲಾಧ್ಯಕ್ಷ ಅಶ್ವತ್ ಪೂಜಾರಿ ಪೈವಳಿಕೆ, ಬೆಳ್ತಂಗಡಿ ಅಧ್ಯಕ್ಷೆ ಶಾರದ, ಸುಳ್ಯ ವಿಶ್ವನಾಥ ರೈ ಕಳೆಂಜ, ಮಂಗಳೂರು ಮಹಾಬಲ ಚೌಟ, ಪುತ್ತೂರು ಮಹಾಬಲ ರೈ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಜಯಾನಂದ ಪಿ., ಜಯಕರ ಶೆಟ್ಟಿ ಉಪಸ್ಥಿತಿದ್ದರು.