ನವದೆಹಲಿ: 2020ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದ್ದು, ರಾಜ್ಯದ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ.
ಬೆಳ್ತಂಗಡಿ ತಾಲೂಕು ನಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್ ಎಸ್., ಕಲಬುರಗಿಯ ಅಫ್ಷಲ್ ಪುರದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್ ಎನ್ನುವ ಇಬ್ಬರು ಶಿಕ್ಷಕರನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಶಿಕ್ಷಕರಿಗೆ ನೀಡುವ ರಾಷ್ಟ್ರೀಯ ಶಿಕ್ಷಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದು, ಒಟ್ಟು 47 ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 7 ಸಾಂಸ್ಥಿಕ ಆಯ್ಕೆ ಸಮಿತಿ ಸೇರಿ ಒಟ್ಟು 153 ಶಿಕ್ಷಕರ ಅರ್ಜಿ ಪರಿಶೀಲಿಸಿ ಈ ಪ್ರಶಸ್ತಿ ಪಟ್ಟಿ ತಯಾರಿಸಿದೆ.
ಪ್ರಶಸ್ತಿ ವಿಜೇತರ ಪೈಕಿ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಸಂಘಟನ್ ನ ಶಿಕ್ಷಕ ಚೆಮ್ಮಲರ್ ಷಣ್ಮುಗನ್, ಉತ್ತರ ಪ್ರದೇಶ ಹಾಗೂ ಗುಜರಾತ್ ನ ತಲಾ ಮೂವರು, , ಮಧ್ಯಪ್ರದೇಶ, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಲ, ಜಾರ್ಖಂಡ್ ಮತ್ತು ತಮಿಳುನಾಡು, ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ತಲಾ ಇಬ್ಬರು, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಉತ್ತರಾಖಂಡ, ರಾಜಸ್ಥಾನ, ಗೋವಾ, ಮಹಾರಾಷ್ಟ್ರ, ಪುದುಶ್ಯೇರಿ, ಛತ್ತೀಸ್ ಗಢ, ಮೇಘಾಲಯ, ತ್ರಿಪುರ, ಅಸ್ಸಾಂ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶ ಲಢಾಕ್ ನ ತಲಾ ಒಬ್ಬ ಶಿಕ್ಷಕರು ಇದ್ದಾರೆ.