ಬೆಳ್ತಂಗಡಿ: ನಾವೂರು ನಿವಾಸಿ, ಚನ್ನರಾಯಪಟ್ಟಣದ ಖಾಸಗಿ ಸಂಸ್ಥೆಯಲ್ಲಿ 9 ದಿನಗಳ ಹಿಂದೆಯಷ್ಟೇ ಕೃಷಿಯಂತ್ರಧಾರೆಯ ಮಾನೇಜರ್ ಆಗಿ ಕೆಲಸ ಸಿಕ್ಕಿದ್ದು, ನಂತರ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಇಂದು ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ನಾವೂರು ಗ್ರಾಮದ ನಾಗಜೆಯ ದಿ| ಶೀನಪ್ಪ ಗೌಡರ ಪುತ್ರ ರಕ್ಷಿತ್(26) ಸಾವನ್ನಪ್ಪಿದ ವ್ಯಕ್ತಿ.
ಕಳೆದ ಆ.22 ರಂದು ಸೋಣ ಶನಿವಾರ ಆಚರಣೆಗೆ ಮನೆಗೆ ಬಂದು ಆ.24 ರಂದು ಕೆಲಸಕ್ಕೆ ತೆರಳಿದ್ದರು. ನಂತರದಿಂದ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೆ ನಾವೂರಿನ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗಣೇಶ್ ಗೌಡ ಹಾಗೂ ಮನೆಯವರು ಚನ್ನರಾಯಪಟ್ಟಣಕ್ಕೆ ಹುಡುಕಿಕೊಂಡು ಹೊರಟಿದ್ದರು.
ಅಲ್ಲಿ ಪತ್ತೆಯಾಗದ ರಕ್ಷಿತ್, ಆತನ ಬೈಕ್ ಮನೆಯ ಕಾಡಿನ ಸಮೀಪ ಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಸಂಜೀವ ಗೌಡ ಕೋಡಿ ಎಂಬುವವರ ಮನೆಯಲ್ಲಿ ಆತನ ಶವ ಪತ್ತೆಯಾಗಿದೆ.
ಕೆರೆಯ ಪಕ್ಕದಲ್ಲಿ ವಿಷದ ಬಾಟಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.