


ಬಂಟ್ವಾಳ: ಬಹುಮುಖ ಪ್ರತಿಭೆ, ಕಾಲಬೆರಳ ಮೂಲಕ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ, ರಾಜ್ಯದ ಗಮನಸೆಳೆದು ಶಾಲೆಗೆ ಕೀರ್ತಿ ತಂದಿರುವ ಬಂಟ್ವಾಳ ಕಂಚಿಕಾರ ಪೇಟೆಯ ವಿಶೇಷ ಚೇತನ ವಿದ್ಯಾರ್ಥಿ ಕೌಶಿಕ್ ಗೆ ಸನ್ಮಾನ ಹಾಗೂ ಅತನ ಎಲ್ಲಾ ಸಾಧನೆಗೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಎಸ್ .ವಿ.ಎಸ್ ದೇವಳ ವಿದ್ಯಾಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆಯ ನಿವೃತ್ತ ಮತ್ತು ಹಾಲಿ ಶಿಕ್ಷಕ, ಶಿಕ್ಷಕಿಯರನ್ನು ಅಭಿನಂದಿಸಿದ ಅಪರೂಪದ ಸಮಾರಂಭ ಬುಧವಾರ ಬಂಟ್ವಾಳ ಎಸ್.ವಿ.ಎಸ್.ದೇವಳ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಸಾಧಕ ಮಾತ್ರವಲ್ಲ ಅತನ ಸಾಧನೆಯ ಹಿಂದಿರುವ ಎಲ್ಲಾ ಅಧ್ಯಾಪಕರನ್ನು ಗುರುತಿಸಿ ಅಭಿನಂದಿಸಿರುವುದನ್ನು ಶ್ಲಾಘಿಸಿದರು. ಜೀವನದಲ್ಲಿ ಪ್ರತಿಯೊರ್ವರು ಸಾಧಿಸುವ ಗುರಿಯನ್ನಿರಿಸಿಕೊಂಡು ಅದನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಪಡಬೇಕು. ಕೌಶಿಕ್ ಇನ್ನಷ್ಟು ಉನ್ನತ ಮಟ್ಟದ ಸಾದನೆಗೆ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೆಲೆಂಟೀನ್ ಡಿಸೋಜ, ಶ್ರೀ ತಿರುಮಲ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ, ಮೊಕ್ತೇಸರ ಪ್ರವೀಣ್ ಕಿಣಿ, ದೇವಳದ ಮಾಜಿ ಮೊಕ್ತೇಸರ ವೇ.ಮೂ.ಜನಾರ್ಧನ ಭಟ್ ಅತಿಥಿಗಳಾಗಿದ್ದು ಶುಭಹಾರೈಸಿದರು.
ಶಾಲಾ ಸಂಚಾಲಕ ಎ. ಗೋವಿಂದ ಪ್ರಭು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸುಮಾರು 128 ವರ್ಷಗಳ ಇತಿಹಾಸವಿರುವ ಈ ವಿದ್ಯಾಸಂಸ್ಥೆ ವಿದ್ಯೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು. ಶಾಲಾ ಮಾಜಿ ಸಂಚಾಲಕ ಅರ್ಲ ದಾಮೋದರ ಪ್ರಭು, ಎಸ್.ವಿ.ಎಸ್. ದೇವಳ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ, ಎಸ್.ವಿ.ಎಸ್. ದೇವಳ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಮ್ಮ, ಹಳೇ ವಿದ್ಯಾಥಿ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಮಲ್ಯ ಹಾಗೂ ಶಾಲಾ ಆಡಳಿತ ಮಂಡಳಿ, ಎಜುಕೇಶನ್ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
ಎಸ್.ವಿ.ಎಸ್. ದೇವಳ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಸ್ವಾಗತಿಸಿದರು. ಶಿಕ್ಷಕ ದಾಮೋದರ ಪಡಿಯಾರ್ ಕೌಶಿಕ್ ನ ಸಾಧನೆಯ ವಿವರವನ್ನು ಸಭೆಯ ಮುಂದಿಟ್ಟರು. ಶಿಕ್ಷಕ ಶೇಖರ್ ಬಿ. ವಂದಿಸಿದರು. ಶಿಕ್ಷಕ ಮುರಳೀಧರ್ ನಿರೂಪಿಸಿದರು.
ಕೃತಕ ಕೈ ಘೋಷಣೆ: ಇದೇ ವೇಳೆ “ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್” ವತಿಯಿಂದ ಕೌಶಿಕ್ ಗೆ ಶೀಘ್ರದಲ್ಲಿಯೇ ಕೃತಕ ಕೈಯನ್ನು ಜೋಡಿಸುವ ಭರವಸೆಯನ್ನು ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್ ಕಾರ್ ನೀಡಿದರು.






