ಬಂಟ್ವಾಳ: ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಸೆಪ್ಟಂಬರ್ 2007ರ ಅವಧಿಯಲ್ಲಿ ಪೂರ್ಣಗೊಂಡು 1 ವರ್ಷದ ನಿರ್ವಹಣೆಯ ಬಳಿಕ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಬೇಕಾಗಿದ್ದು ಈವರೆಗೆ ಹಸ್ತಾಂತರವಾಗಿರುವುದಿಲ್ಲ.
ಈ ದಿನ ಶಾಸಕರು ಜಕ್ರಿಬೆಟ್ಟು ರೇಚಕ ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವಾರು ಸಮಸ್ಯೆಗಳು ಕಂಡು ಬರುತ್ತಿದ್ದು ನಿರ್ವಹಣೆಗಳ ಬಗ್ಗೆ ಬಂಟ್ವಾಳ ಪುರಸಭೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಗಳೂರು ಇವರುಗಳ ಮಧ್ಯೆ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಗೊಂದಲಗಳಿದ್ದು ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸ್ಥಳದಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿ ಶ್ರೀಘದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವ ಬಗ್ಗೆ ನಿರ್ಧರಿಸಲಾಗಿದೆ.
ಈ ಸಂಧರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯನಿರ್ವಾಹಣಾ ಅಧಿಕಾರಿ ಚಂದ್ರಶೇಖರ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಸಹಾಯಕ ಅಭಿಯಂತರರಾದ ಶೋಭಾಲಕ್ಷ್ಮಿ, ಪುರಸಭೆಯ ಅಭಿಯಂತರರಾದ ಡೊಮಿನಿಕ್ ಡಿಮೆಲ್ಲೊ, ಶಾಸಕರ ಆಪ್ತಸಹಾಯಕ ದಿನೇಶ್ ಹಾಗೂ ರೇಚಕ ಸ್ಥಾವರದ ಸಿಬ್ಬಂದಿಗಳು ಉಪಸ್ಥಿತರಿದ್ದರು.