



ಬಂಟ್ವಾಳ: ಮಕ್ಕಳಿಗೆ ತಿಂಡಿ ತರಲೆಂದು ಪೇಟೆಗೆ ಹೋದವರು ವಾಪಾಸು ಮನೆಗೆ ಬರದೆ ಕಾಣೆಯಾಗಿರುವ ಬಗ್ಗೆ ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಸತೀಶ್ (44) ಕಾಣೆಯಾದ ವ್ಯಕ್ತಿ.
ಸತೀಶ್ ಅವರು ಬಂಟ್ವಾಳದಲ್ಲಿ ಭತ್ತ ಕೊಯಿಲು ಮತ್ತು ಕಟಾವು ಮಾಡುವ ಕೆಲಸ ಮಾಡುತ್ತಿದ್ದು, ಆದಿತ್ಯವಾರ ಕೆಲಸ ಮುಗಿಸಿಕೊಂಡು ಮನೆಯ ಕಡೆ ಬಂದಿದ್ದರು.
ಬಳಿಕ ಅಕ್ಕನ ಮಕ್ಕಳಿಗೆ ತಿಂಡಿ ತರಲೆಂದು ಸಮೀಪದ ಅಂಗಡಿಗೆಂದು ತೆರಳಿದವರು ವಾಪಾಸು ಮನೆಗೆ ಬರದೆ ಕಾಣೆಯಾಗಿದ್ದಾರೆ ಎಂದು ಅವರ ತಮ್ಮ ಆಶೋಕ್ ದೂರಿನಲ್ಲಿ ತಿಳಿಸಿದ್ದಾರೆ.
ಅವರನ್ನು ಹುಡುಕಾಟ ನಡೆಸಿ ದ ವೇಳೆ ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ನ ತೋಡಿನ ಸಮೀಪದ ಗಿಡದ ಪೊದೆಯ ಮಧ್ಯೆ ಸತೀಶ್ ಅವರು ಧರಿಸಿದ ವೇಸ್ಟಿ ಹಾಗೂ ಕೊಡೆ ಕಂಡು ಬಂದಿದ್ದು, ಇವರು ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು, ನಾಪತ್ತೆಯಾಗಿರಬೇಕು ಎಂಬ ಸಂಶಯ ಮನೆಯವರು ವ್ಯಕ್ತಪಡಿಸಿದ್ದು, ಹುಡುಕಿ ಕೊಡುವಂತೆ ಠಾಣೆಗೆ ದೂರು ನೀಡಿದ್ದಾರೆ.






