


ಮಂಗಳೂರು : ಕೊರೊನಾ ಕಾರಣದಿಂದಾಗಿ (ಜು. 25) ನಾಗರಪಂಚಮಿ ದಿನದಂದು ಕುಡುಪು ದೇವಸ್ಥಾನಕ್ಕೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಆಡಳಿಯ ಮಂಡಳಿ, ”ಕ್ಷೇತ್ರದಲ್ಲಿ ಪ್ರತಿ ವರ್ಷ ಆಚರಿಸುವ ನಾಗರಪಂಚಮಿ ಈ ಬಾರಿ ಜುಲೈ 25 ರ ಶನಿವಾರದಂದು ನಿಗದಿಯಾಗಿದ್ದು, ಈ ದಿನ ಕೋವಿಡ್ -19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾಧಿಗಳಿಂದ ಸಾಮಾಜಿಕ ಅಂತರವನ್ನು ಕಾಡಪಾಡುವುದು ಕಷ್ಟಕರವಾಗುವುದರಿಂದ ಮುಂಜಾಗ್ರತ ಕ್ರಮವಾಗಿ ನಾಗರ ಪಂಚಮಿ ದಿನವಾದ ಜುಲೈ 25 ರಂದು ಭಕ್ತಾದಿಗಳಿಗೆ ಶ್ರೀ ಕ್ಷೇತ್ರಕ್ಕೆ ಭೇಟಿಯನ್ನು ನಿರ್ಬಂಧಿಸಲಾಗಿದೆ. ಅಂದು ಎಲ್ಲಾ ಭಕ್ತಾಧಿಗಳಿಗೆ ದೇವಾಲಯದ ಆವರಣಕ್ಕೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದಿನದಂದು ಯಾವುದೇ ಭಕ್ತಾಭಿಮಾನಿಗಳು ದೇವಾಲಯಕ್ಕೆ ಭೇಡಿ ನೀಡದೆ ಸಹಕರಿಸಬೇಕಾಗಿ ವಿನಂತಿ” ಎಂದು ತಿಳಿಸಲಾಗಿದೆ.
”ನಾಗರ ಪಂಚಮಿ ದಿನದಂದು ದೇವಾಲಯದಲ್ಲಿ ಯಾವುದೇ ಸೇವೆಗಳು, ಸೇವಾ ಪ್ರಸಾದ ವಿತರಣೆ, ತೀರ್ಥ ಪ್ರಸಾದ ಮತ್ತು ಅನ್ನಸಂತರ್ಪಣೆಗಳು ಇರುವುದಿಲ್ಲ. ಅಲ್ಲದೇ ಆ ದಿನದಂದು ಹಾಲು, ಸೀಯಾಳ, ಹಣ್ಣುಕಾಯಿ ಮತ್ತಿತರ ಯಾವುದೇ ಪೂಜಾ ಸಾಮಾಗ್ರಿಗಳನ್ನು ಸ್ವೀಕರಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾದಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು” ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಕಾರಣದಿಂದ ನಾಗರ ಪಂಚಮಿಯಂದು ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಎಂಬ ದೇವಾಲಯದಿಂದ ನೀಡಲಾದ ಪ್ರಕಟಣೆ ಎಂದು ಹೇಳಲಾದ ಸುದ್ದಿಯೊಂದು ಹರಿದಾಡುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ದೇವಾಲಯದ ಆಡಳಿತ ಮಂಡಳಿ, ದೇವಾಲಯದಿಂದ ಯಾವುದೇ ಪ್ರಕಟನೆ ನೀಡಿಲ್ಲ ಎಂದು ತಿಳಿಸಿತ್ತು.
ಆದರೆ ಇದೀಗ ದೇವಾಲಯದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯ ಮೂಲಕ ನಾಗರಪಂಚಮಿಯ ದಿನದಂದು ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಿರುವ ವಿಚಾರ ಸ್ಪಷ್ಟಪಡಿಸಿದೆ.






