ಬಂಟ್ವಾಳ: ನಾಳೆ(ಜು.19) ಬೆಳಗ್ಗೆ 6 ಗಂಟೆಯಿಂದ ಜು. 21ರಂದು ಬೆಳಗ್ಗೆ 9 ಗಂಟೆಯವರೆಗೆ ಕಾರಿಂಜ ಶ್ರೀ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನ ಹಾಗೂ ಆಟಿ ಅಮಾವಾಸ್ಯೆ ಪ್ರಯುಕ್ತ ನಡೆಯುವ ತೀರ್ಥಸ್ನಾನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ಹೇಳಿದ್ದಾರೆ.
ಈ ವಿಚಾರವಾಗಿ ಶ್ರೀ ಕ್ಷೇತ್ರ ಕಾರಿಂಜದಲ್ಲಿ ದೇಗುಲದ ಅರ್ಚಕರು, ಗ್ರಾಮಣಿಗಳು ಹಾಗೂ ಗ್ರಾಮಸ್ಥರು ಸೇರಿ ಸಭೆ ಸೇರಿದ್ದು,ದೇವರ ದರ್ಶನ ಹಾಗೂ ತೀರ್ಥ ಸ್ನಾನಕ್ಕೆ ನಿಷೇದ ಹೇರಲು ತೀರ್ಮಾನಿಸಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಈ ವೇಳೆ ಸಾಮಾಜಿಕ ಅಂತರ ಪಾಲನೆ ಕಷ್ಟವಾಗುವ ಕಾರಣ ತೀರ್ಥಸ್ನಾನ ನಿಷೇಧ ಮಾಡುವುದು ಅನಿವಾರ್ಯವಾಗಿದೆ ಎಂಬುದಾಗಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.