


ಬಂಟ್ವಾಳ: ಕಲ್ಲಡ್ಕ ಶ್ರೀ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ ಇದರ ವತಿಯಿಂದ ಕಲ್ಲಡ್ಕದ ಪ್ರತಿಷ್ಠಾನದ ಕಚೇರಿಯಲ್ಲಿ ಚೈನಾದ ಗಡಿಯಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಪ್ರತಿಷ್ಠಾನದ ಕೋಶಾಧಿಕಾರಿ ವಜ್ರನಾಥ ಕಲ್ಲಡ್ಕ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಯತಿನ್ ಕುಮಾರ್ ನುಡಿನಮನ ಸಲ್ಲಿಸಿ, ನಮ್ಮ ಮತ್ತು ನಮ್ಮ ಪೀಳಿಗೆಯ ನೆಮ್ಮದಿಯ ನಾಳೆಗಳಿಗಾಗಿ ತನ್ನ ಸಾವನ್ನು ಲೆಕ್ಕಿಸದೆ ಪ್ರಾಣಾರ್ಪಣೆ ಮಾಡಿದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಅಲ್ಲದೆ ಮತ್ತೇನನ್ನು ಸಲ್ಲಿಸಲು ಸಾಧ್ಯವಿಲ್ಲ. ನಾವು ಪ್ರತಿಯೊಂದು ಹೆಜ್ಜೆ ಇಡುವಾಗಲೂ ತನ್ನ ಕುಟುಂಬದ ಭವಿಷ್ಯದ ಬಗ್ಗೆ ಯೋಚಿಸಿ ಹೆಜ್ಜೆ ಇಡುತ್ತೇವೆ ಆದರೆ ನಮ್ಮನ್ನು ದಿನದ ಇಪ್ಪತ್ನಾಲ್ಕು ಗಂಟೆ ಕಾಯುವ ಸೈನಿಕರು ತನ್ನ ಮತ್ತು ತಮ್ಮ ಕುಟುಂಬದ ಭವಿಷ್ಯವನ್ನು ಯೋಚಿಸುವುದೇ ಇಲ್ಲ. ಅವರಿಗೆ ಜೀವನ ಪೂರ್ತಿ ಕೃತಜ್ಞರಾಗಿರಬೇಕಾದದ್ದು ನಮ್ಮ ಧರ್ಮ ಎಂದರು.
ಉತ್ಸವ ಸಮಿತಿಯ ದಿನೇಶ್ ಕೃಷ್ಣಕೋಡಿ ಇವರು ಶ್ರದ್ಧಾಂಜಲಿ ಸಲ್ಲಿಸಿ, ನಮ್ಮ ದೇಶಕ್ಕೆ ಮಗ್ಗುಲ ಮುಳ್ಳಾಗಿರುವ ಚೈನಾದ ಆರ್ಥಿಕ ವ್ಯವಸ್ಥೆಗೆ ನಾವು ಮಾಡುವ ಸಹಕಾರವನ್ನು ನಿಲ್ಲಿಸದಿದ್ದರೆ ನಾವು ನಮ್ಮ ಸೈನಿಕರಿಗೆ ದ್ರೋಹ ಬಗೆದಂತೆ ಎಂದು ಎಚ್ಚರಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಅವರು ಸ್ವದೇಶಿ ಸಂಕಲ್ಪವನ್ನು ಮಾಡಿಸಿ ವಂದಿಸಿದರು.
ಸೇರಿದ ದೇಶಭಕ್ತ ಬಂಧುಗಳು ಪುಷ್ಪಾರ್ಚನೆ ಸಲ್ಲಿಸಿ, ದೇವಸಾಯುಜ್ಯ ಹೊಂದಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರತಿಷ್ಠಾನದ ದಿನೇಶ್ ರಾಮನಗರ, ಗಣೇಶ್ ಶೆಟ್ಟಿ, ಮತ್ತು ಉತ್ಸವ ಸಮಿತಿಯ ಸತೀಶ್ ಆಚಾರ್ಯ, ಯೋಗೀಶ್, ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು.





