ಬಂಟ್ವಾಳ: ಮಾಣಿ ಸಮೀಪದ ಪಲಿಕೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಮರದ ಕಾಂಡವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತವಾಗಿ ಅವಕಾಶ ಮಾಡಿಕೊಟ್ಟ ವಿಟ್ಲ ಠಾಣಾ ಪ್ರಭಾರ ಎಸ್.ಐ.ರಾಜೇಶ್ ಕೆ.ವಿ.ಮತ್ತು ಅವರ ತಂಡ.
ಬುಧವಾರ ರಾತ್ರಿ ವೇಳೆ ಸುರಿಯುತ್ತಿದ್ದ ಮಳೆಗೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಮಧ್ಯ ಕ್ಕೆ ಉರುಳಿಬಿದ್ದ ಕಡಿದುಉಳಿದ ಮರವೊಂದರ ಕಾಂಡದಿಂದ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು.
ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಗುತ್ತಿಗೆ ವಹಿಸಿಕೊಂಡಿರುವ ಕಂಪೆನೆ ರಸ್ತೆಯ ಬದಿಯ ಮರಗಳನ್ನು ಕಡಿದುಕೊಂಡು ಹೋಗಿದ್ದರು.
ಇಲ್ಲೂ ಅದೇ ರೀತಿ ರಸ್ತೆಯ ಮಾಣಿ ಸಮೀಪದ ಪಲಿಕೆ ಮಹಾವೀರ ಇಂಡಸ್ಟ್ರೀಸ್ ನ ಮುಂಭಾಗದಲ್ಲಿದ್ದ ಹಳೆಯ ಬೃಹದಾಕಾರದ ಮರವೊಂದನ್ನು ಕಡಿದಿದ್ದರು.ಆದರೆ ಮರದ ಅರ್ಧ ಭಾಗ ಮತ್ತು ಕಾಂಡ ಅಲ್ಲೇ ಉಳಿದಿತ್ತು.
ಉಳಿದ ಭಾಗ ಬುಧವಾರ ರಾತ್ರಿ ಗಾಳಿ ಮಳೆಗೆ ರಸ್ತೆಗೆ ಉರುಳಿ ಬಿದ್ದಿದೆ.
ಇದರ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿ ಏಕ ಸಂಚಾರ ಮಾಡಲಾಗುತ್ತಿತ್ತು.
ಈ ಬಗ್ಗೆ ” ನಮ್ಮ ಬಂಟ್ವಾಳ ವಾಹಿನಿ” ವರದಿ ಪ್ರಕಟಿಸಿ ಸಂಬಂಧಿಸಿದ ಇಲಾಖೆ ತೆರವುಗೊಳಿಸುವಂತೆ ಮನವಿ ಮಾಡಿತ್ತು.
ಆದರೆ ಹೆದ್ದಾರಿ ಗೆ ಸಂಬಂಧಿಸಿದ ಇಲಾಖೆ ಸಂಜೆಯವರೆಗೆ ಇತ್ತ ಗಮನ ಹರಿಸಿದ ಹಿನ್ನಲೆಯಲ್ಲಿ ಮಂಗಳೂರು ಪೋಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಅವರ ಅದೇಶದಂತೆ ವಿಟ್ಲ ಪೋಲೀಸ್ ಠಾಣೆಯ ಪ್ರಭಾರ ವಹಿಸಿಕೊಂಡಿರುವ ಎಸ್.ಐ.ರಾಜೇಶ್ ಕೆ.ವಿ ಹಾಗೂ ಎ.ಎಸ್. ಐ.ಬಾಲಕೃಷ್ಣ ಅವರು ಸ್ಥಳಕ್ಕೆ ತೆರಳಿ ಖಾಸಗಿ ಜೆ.ಸಿ.ಬಿ ಬಳಸಿ ಮರದ ತುಂಡನ್ನು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.