ಬಂಟ್ವಾಳ: ಬಂಟ್ವಾಳ ತಾಲೂಕು ಸರಪಾಡಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ನಡೆಸಲ್ಪಡುತ್ತಿರುವ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇದರ ಏಳನೇ ವರ್ಷದ ಮೇಳದ ತಿರುಗಾಟದ ಕೊನೇ ದಿನದ ಪತ್ತನಾಜೆ ಪ್ರಯುಕ್ತ ಗೆಜ್ಜೆ ಸೇವೆ ಹಾಗೂ ದೇವರ ಸೇವೆ ಕಾರ್ಯಕ್ರಮ ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಮೇ 23ರಂದು ಜರಗಿತು.
ಬಾಚಕೆರೆ ಶ್ರೀ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರು ಮಾತನಾಡಿ, ದೇವರ ದಯೆ ಹಾಗೂ ಕಲಾಭಿಮಾನಿಗಳ ಸಹಕಾರದಿಂದ ಮೇಳ 7 ವರ್ಷಗಳ ತಿರುಗಾಟವನ್ನು ಯಶಸ್ವಿಯಾಗಿ ಪೂರೈಸಿದ್ದು ಮುಂದಕ್ಕೂ ಸಹಕಾರ ನೀಡಬೇಕಾಗಿದೆ. ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಪಾಲಿಸಿಕೊಂಡು ಸಾಂಪ್ರದಾಯಿಕವಾಗಿ ಗೆಜ್ಜೆ ಸೇವೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಬಾಚಕೆರೆ ಮೇಳದ ವ್ಯವಸ್ಥಾಪಕ ಪ್ರಶಾಂತ್ ಸಿ.ಕೆ., ಮೇಳದ ಪ್ರತಿನಿಧಿ ಶಶಿಧರ ಬಾಚಕೆರೆ, ಸುಂದರ ಬಾಚಕೆರೆ, ನಿರಂಜನ್ ಬಾಚಕೆರೆ, ಮೇಳದ ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು.