ವಿಟ್ಲ: ಗೋಕಳ್ಳತನ ಪ್ರಕರಣವೊಂದರನ್ನು ಬೇಧಿಸಲು ಮುಂದಾದ ವಿಟ್ಲ ಪೊಲೀಸರ ತಂಡ ಬಾರಿ ದೊಡ್ಡ ಪ್ರಮಾಣದ ಕಾಸಾಯಿಕಾನೆಗೆ ದಾಳಿಯನ್ನು ಮಾಡಿ ಸುಮಾರು 200 ದನದ ಚರ್ಮ, 8 ಗೋವುಗಳು ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದ ಘಟನೆ ಸಾಲೆತ್ತೂರು ಅಲ್ಲಿ ಗುರುವಾರ ನಡೆದಿದೆ.
ಕೊಳ್ನಾಡು ಕಟ್ಟತ್ತಿಲ ಮಠ ನಿವಾಸಿ ಹಾರಿಸ್ ಯಾನೇ ಮಹಮ್ಮದ್ ಹಾರೀಸ್ (22) ಬಂಧಿತ ಆರೋಪಿಯಾಗಿದ್ದಾನೆ. ದನ ಕಳ್ಳತನದ ಮಾಹಿತಿಯನ್ನು ಆಧರಿಸಿ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿದ ಸಂದರ್ಭ ಹಾರೀಸ್ ಪಲಾಯನ ಮಾಡಲು ಯತ್ನಿಸಿದ್ದು, ತೋಟದಲ್ಲಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದೂ ಅಲ್ಲದೆ ಪೊಲೀಸರ ಕೈಗೆ ಸಿಲುಕಿ ಹಾಕಿಕೊಂಡಿದ್ದಾನೆ. ಈತನ ವಿಚಾರಣೆ ಸಮಯದಲ್ಲಿ ಕಾಸಾಯಿಖಾನೆಯ ಮಾಹಿತಿ ಸಮಗ್ರ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಮಾಹಿತಿ ಆಧಾರದಲ್ಲಿ ಸಾಲೆತ್ತೂರು ಐತ್ತಕುಮೇರು ಭಾಗಕ್ಕೆ ಪೊಲೀಸ್ ತಂಡ ದಾಳಿ ನಡೆಸಿದ್ದು, 8 ಗೋವು, 200 ದನದ ಚರ್ಮ ಸ್ಥಳದಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಕಸಾಯಿಖಾನೆ ನಡೆಸಲು ಬಳಸಿದ್ದರೆನ್ನಲಾದ ನಾಲ್ಕು ದಿಚಕ್ರ ವಾಹನ, ಅಟೋ, ಅಕೋಶ್ ಲೈಲಾಂಡ್ ದೋಸ್ತು ವಾಹನ ಸೇರಿ ಹಲವು ಮಾಂಸ ಮಾಡಲು ಬಳಸುವ ಸಾಮಾಗ್ರಿಗಳನ್ನು ಸ್ಥಳದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಕ್ರಮ ಕಸಾಯಿಕಾನೆ ಸ್ಥಾಪನೆ ಸೇರಿ ದನಗಳನ್ನು ಕಳ್ಳತನದ ಕೃತ್ಯದಲ್ಲಿ ಹಲವು ಘಟಾನುಘಟಿಗಳು ಇದ್ದಾರೆನ್ನಲಾಗಿದೆ. ಹಲವು ಸಮಯದಿಂದ ಗಡಿ ಭಾಗದ ನೆಪವನ್ನು ಹೇಳಿಕೊಂಡು ಎಲ್ಲರಿಂದ ತಪ್ಪಿಸಿಕೊಳ್ಳುತ್ತಿದ್ದ ಮಾಹಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗೋ ಕಳ್ಳತನದ ಪ್ರಕರಣಗಳಿಗೆ ಸಂಬಂಧವಿರುವ ಶಂಕೆ ಇದ್ದು, ಪೊಲೀಸರು ಈ ನಿಟ್ಟನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟನ್ ಡಿಸೋಜ್, ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಉಪನಿರೀಕ್ಷಕ ವಿನೋದ್ ಎಸ್. ಕೆ. ಅವರನ್ನೊಳಗೊಂಡ ಪೊಲೀಸ್ ಸಿಬ್ಬಂದಿಗಳಾದ ಜಯರಾಮ ಕೆ. ಟಿ., ಪ್ರತಾಪ ರೆಡ್ಡಿ, ವಿಶ್ವನಾಥ, ಶಂಕರ್, ಅಶೋಕ, ಹೇಮರಾಜ, ಡ್ಯಾನಿ ತ್ರಾವೋ, ವಿನೋದ್, ವಿಠಲ ಮತ್ತಿತರರ ತಂಡ ಕಾರ್ಯಾಚರಣೆ ನಡೆಸಿದೆ.
ಲಕ್ಷ ಹಣದ ಆಮಿಷ!
ಪೊಲೀಸರು ಮನೆಗೆ ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದ ಮಾಹಿತಿ ತಿಳಿಯುತ್ತಿದ್ದಂತೆ ಅಕ್ರಮ ದನ ಸಾಗಾಟ ಜಾಲದಿಂದ ಲಕ್ಷ ಲಕ್ಷ ನೀಡುವ ಆಮಿಷ ಒಡ್ಡಲಾಗಿದೆ ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ಬಗ್ಗದೆ ಪೊಲೀಸರು ಜಿಲ್ಲೆಯ ಬಹಳದೊಡ್ಡ ಜಾಲವೊಂದನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.