


ಬಂಟ್ವಾಳ: ಬಂಟ್ವಾಳತಾಲೂಕು ಬರಿಮಾರು ಗ್ರಾಮ ಪಂಚಾಯತ್ ನ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಕು.ಶಾರಿಕಾ ಎಂ. ರವರನ್ನು ಅವರು ಜಿ.ಪಂ ಸದಸ್ಯರಿಗೆ, ಗ್ರಾಪಂ ಸದಸ್ಯರಿಗೆ ಗೌರವ ಕೊಡುವುದಿಲ್ಲವೆಂಬ ಆಪಾದನೆಯ ಮೇರಗೆ ಪಂಚಯತ್ ಸದಸ್ಯರಾದ ಹರಿಕೃಷ್ಣ ಮತ್ತು ಇತರರು ಸದರಿ ನೌಕರಳನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ 2017ರಲ್ಲಿ ನಿರ್ಣಯ ಕೈಗೊಂಡಿದ್ದರು. 8 ಗ್ರಾ.ಪಂ ಸದಸ್ಯರಲ್ಲಿ 5 ಜನ ನಿರ್ಣಯದ ಪರವಾಗಿದ್ದ ಕಾರಣ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ. ಗೋಕುಲದಾಸ್ ಭಕ್ತ ರವರು ಸಿಬ್ಬಂದಿಯನ್ನು ವಜಾಗೊಳಿಸಿ ಆದೇಶಿಸಿದ್ದರು. ಸದ್ರಿ ಆದೇಶವನ್ನು ಪ್ರಶ್ನಿಸಿ ಗ್ರಾ.ಪಂ ಸಿಬ್ಬಂದಿ ಕು.ಶಾರಿಕಾ ರವರು ದ.ಕ.ಜಿಲ್ಲಾ ಪಂಚಾಯತ್ ಸಿ.ಇ.ಒ ರವರಿಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ನೌಕರಳ ಮೇಲ್ಮನವಿಯ ವಿಚಾರಣೆ ನಡೆಸಿದ ಅಂದಿನ ಸಿ.ಇ.ಒ ಡಾ.ಎಂ.ಆರ್.ರವಿ ರವರು ಗ್ರಾಮ ಪಂಚಾಯತ್ ನೌಕರಳನ್ನು ವಜಾಗೊಳಿಸಿದ ಗ್ರಾ.ಪಂ ಆದೇಶವನ್ನು ರದ್ದು ಪಡಿಸಿದ್ದರು. ಸಿ.ಇ.ಒ ರವರ ಆದೇಶವನ್ನು ಪ್ರಶ್ನಿಸಿ ಸದಸ್ಯ ಹರಿಕೃಷ್ಣ ಮತ್ತು ಇತರರು ಕರ್ನಾಟಕ ಉಚ್ಛ ನ್ಯಾಯಾಲಯ ದಲ್ಲಿ ಮೇಲ್ಮನವಿಯನ್ನು ಸಲ್ಲಿಸಿ ಸಿ.ಇ.ಒ ರವರ ಆದೇಶಕ್ಕೆ ತಡೆಯಾಜ್ಞೆಯನ್ನು ತಂದಿದ್ದರು. ಇದರಿಂದಾಗಿ ಬರಿಮಾರಿ ಗ್ರಾ.ಪಂ ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಇಲ್ಲದೇ ಕಳೆದ ಮೂರು ವರ್ಷಗಳಿಂದ ಸಮಸ್ಯೆ ತಲೆದೋರಿತ್ತು. ಪ್ರಸ್ತುತ ಗ್ರಾ.ಪಂ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲು ಎರಡು ತಿಂಗಳು ಬಾಕಿ ಇರುವ ಸಂಧರ್ಭದಲ್ಲಿ ಹೈಕೋರ್ಟ್ ನಲ್ಲಿ ದಾಖಲಿಸಿದ ದಾವೆಯನ್ನು ಸದಸ್ಯರಾದ ಹರಿಕೃಷ್ಣ ಮತ್ತು ಇತರರು ಏಕಾಏಕಿ ಹಿಂಪಡೆದಿರುವುದರಿಂದ ದಾವೆ ವಜಾಗೊಂಡಿರುತ್ತದೆ. ಇದರಿಂದಾಗಿ ದ.ಕ.ಜಿಲ್ಲಾ ಪಂಚಾಯತ್ ಸಿ.ಇ.ಒ ರವರ ಆದೇಶಕ್ಕೆ ಇದ್ದ ತಡೆಯಾಜ್ಞೆ ತೆರವಾಗಿರುತ್ತದೆ. ಪ್ರಸ್ತುತ ದ.ಕ.ಜಿಲ್ಲಾ ಪಂಚಾಯತ್ ರವರ ಆದೇಶದಂತೆ ಈಗಿನ ಪಂಚಾಯತ್ ಅಭಿವೃದ್ಧಿ ಆಧಿಕಾರಿ ಶ್ರೀ. ಲಕ್ಷ್ಮಣ ಹೆಚ್.ಕೆ ರವರು ಪಂಚಾಯತ್ ಸಿಬ್ಬಂದಿ ಕು.ಶಾರಿಕಾ ಎಂ. ರವರನ್ನು ಕರ್ತವ್ಯಕ್ಕೆ ಮರುನಿಯುಕ್ತಿಗೊಳಿಸಿ ಆದೇಶಿದ್ದು , ಸದರಿ ಆದೇಶದಂತೆ ಸಿಬ್ಬಂದಿ ದಿನಾಂಕ 30.04.2020 ರಂದು ಕರ್ತವ್ಯಕ್ಕೆ ವರದಿ ಮಾಡಿ ಕೊಂಡಿರುತ್ತಾರೆ.





